ಇನ್ನೊಂದು ಅಕ್ಷರಂಗಳ

"ಹರಿವ ಲಹರಿ"ಯ ಹಾದಿ->->->

ಹೀಗೊಂದು ಯೋಚನೆ:

*ಪರಿಪೂರ್ಣತೆಯೆಂದರೆ ಮುಕ್ತಾಯ; ಹಾದಿಯ ಕೊನೆ.*

Monday 30 April, 2007

ಆತ್ಮ ಚಿಂತನ-೦೧

"ನನ್ನ ಇತ್ತೀಚಿನ ಓದಿನ ಪ್ರಕಾರ..." ಎಂದಿದ್ದೆ.
ಕಳೆದೊಂದು ವರ್ಷದಿಂದ `ಆತ್ಮ'ದ ಬಗ್ಗೆ ಓದುತ್ತಿದ್ದೇನೆ.
ಮೊದಲಾಗಿ ಓದಿದ್ದು (ಗೆಳೆಯರೊಬ್ಬರು ತಂದುಕೊಟ್ಟದ್ದು): ಮೈಕೆಲ್ ನ್ಯೂಟನ್‌ರ "ಜರ್ನಿ ಆಫ್ ಸೋಲ್ಸ್" (ಲೆವೆಲ್ಲಿನ್ ಪಬ್ಲಿಕೇಷನ್ಸ್, ೧೯೯೪). ತದನಂತರ ಸಾಲಾಗಿ ಓದಿದ್ದು: ಬ್ರಯಾನ್ ವೈಸ್‌ರ "ಮೆನಿ ಲೈವ್ಸ್, ಮೆನಿ ಮಾಸ್ಟರ್ಸ್" (ಫಯ‌ರ್ ಸೈಡ್, ೧೯೮೮), "ತ್ರೂ ಟೈಮ್ ಇನ್‍ಟು ಹೀಲಿಂಗ್" (ಫಯರ್ ಸೈಡ್, ೧೯೯೨), "ಮೆಸೇಜಸ್ ಫ್ರಮ್ ದ ಮಾಸ್ಟರ್ಸ್" (ವಾರ್ನರ್ ಬುಕ್ಸ್, ೨೦೦೦). ಈಗ ಓದುತ್ತಿರುವುದು: ಮೈಕೆಲ್ ನ್ಯೂಟನ್‌ರ "ಡೆಸ್ಟಿನಿ ಆಫ್ ಸೋಲ್ಸ್" (ಲೆವೆಲ್ಲಿನ್ ಪಬ್ಲಿಕೇಷನ್ಸ್, ೨೦೦೬).

ಡಾ.ನ್ಯೂಟನ್ (ಕ್ಯಾಲಿಫೋರ್ನಿಯಾ) ಮತ್ತು ಡಾ.ವೈಸ್ (ಫ್ಲೋರಿಡಾ)- ಅಮೆರಿಕದ ಎರಡು ತೀರಗಳಲ್ಲಿ ಮನೋವೈದ್ಯರಾಗಿ ತಮ್ಮ ಕಾರ್ಯಕ್ಷೇತ್ರ ಆರಿಸಿಕೊಂಡವರು. ತಮ್ಮ ಗ್ರಾಹಕರನ್ನು ಸಮ್ಮೋಹನ ಚಿಕಿತ್ಸೆಗೆ ಒಳಪಡಿಸುತ್ತಿದ್ದವರು. ಇಬ್ಬರೂ ಆಕಸ್ಮಿಕವಾಗಿ ತಮ್ಮ ವೃತ್ತಿಯಲ್ಲಿ ಆತ್ಮದ ತಿಳುವಳಿಕೆ ಪಡೆದವರು. ಗ್ರಾಹಕರು ಇದ್ದಕ್ಕಿದ್ದಂತೆ ಈ ಜನ್ಮದ ಹೊರತಾಗಿ ಪೂರ್ವಜನ್ಮದ ಬಗ್ಗೆ ಮಾತನಾಡತೊಡಗಿದಾಗ ಒಮ್ಮೆಗೆ ಗಾಬರಿಯಾದರೂ ಸುಧಾರಿಸಿಕೊಂಡು ಅದನ್ನು ವಿಶ್ಲೇಷಿಸಿದವರು. ಅದರಲ್ಲಿ ಮತ್ತಷ್ಟು ಆಸಕ್ತಿ ತಾಳಿ, ಆ ಹಾದಿಯಲ್ಲೇ ಕ್ರಮಿಸಿ (ಶ್ರಮಿಸಿ), ವೈಜ್ಞಾನಿಕವಾಗಿ ಆತ್ಮದ ಬಗ್ಗೆ ಒಂದಿಷ್ಟು ವಿವರ ಕಲೆಹಾಕಿ ಪುಸ್ತಕ ರೂಪಕ್ಕಿಳಿಸಿದವರು. ಇಬ್ಬರ ಅಭಿಪ್ರಾಯದಲ್ಲೂ ನಮ್ಮ ಆತ್ಮದಲ್ಲಿ ಪೂರ್ವಜನ್ಮದ ನೆನಪುಗಳು ಹುದುಗಿರುತ್ತವೆ.

ಪ್ರಜ್ಞೆ- ಸುಪ್ತಪ್ರಜ್ಞೆ- ಉಪಪ್ರಜ್ಞೆ- ಅತೀಂದ್ರಿಯ ಪ್ರಜ್ಞೆ (ಆಳವಾದ ಸಮ್ಮೋಹಿತ ಸ್ಥಿತಿ) [conscious- unconscious- subconscious- superconscious (of deep hypnotic stage)]-- ಮಾನವ ಪ್ರಜ್ಞೆಯ ವಿವಿಧ ನೆಲೆಗಳು. ಇವುಗಳಲ್ಲಿ ಪ್ರಜ್ಞೆ, ಸುಪ್ತಪ್ರಜ್ಞೆ, ಮತ್ತು ಉಪಪ್ರಜ್ಞೆಗಳು ಸಾಮಾನ್ಯವಾಗಿ ಎಲ್ಲರಿಗೂ ತಿಳಿದವುಗಳೇ. ಇನ್ನುಳಿದ `ಅತೀಂದ್ರಿಯ ಪ್ರಜ್ಞೆ' ನಮ್ಮ ಆತ್ಮದ ನೆಲೆ. ವ್ಯಕ್ತಿ ಸಮ್ಮೋಹಿತನಾದಾಗ ಸಾಮಾನ್ಯವಾಗಿ ಇಷ್ಟು ಆಳವಾದ ಪ್ರಜ್ಞಾನೆಲೆಗೆ ಇಳಿಯುವುದಿಲ್ಲ. ಬಹುತೇಕ ಸಮ್ಮೋಹನ ಚಿಕಿತ್ಸೆಯಲ್ಲಿ ಇದೇ ಜೀವನದ ವಿವಿಧ ಸ್ತರಗಳ ಬೇನೆ-ಬೇಸರಗಳ ನೆಲೆಗಳನ್ನು ಅಗೆದು ತೆಗೆದು, ವಿವರವಾಗಿ ವಿಶ್ಲೇಷಿಸಿ ಅದನ್ನು ನೋವಿನ ನೆಲೆಯಿಂದ ಹೊರತುಗೊಳಿಸಿ, ಆಳವಾದ ಪ್ರಜ್ಞಾಸ್ತರದ ಘಾಸಿಗಳನ್ನು ವಾಸಿಮಾಡುವ ಪ್ರಯತ್ನ ನಡೆಯುತ್ತದೆ. ಆದರೆ, ಡಾ.ನ್ಯೂಟನ್ ಮತ್ತು ಡಾ.ವೈಸ್ ಹೇಳುವಂತೆ "ರೆಗ್ರೆಷನ್ ಥೆರಪಿ"ಯಲ್ಲಿ ವ್ಯಕ್ತಿ ತನ್ನ ಬೇನೆ-ಬೇಸರಗಳಿಗೆ ಪೂರ್ವಜನ್ಮದ ಕಾರಣಗಳಿದ್ದರೂ ಅದನ್ನೂ ಕಂಡುಕೊಂಡು ವಾಸಿ ಮಾಡಿಕೊಳ್ಳಬಹುದು. ಮುಂದೆ ಶಾಂತ ಜೀವನ ನಡೆಸಬಹುದು.

ಮೊದಲ ಕಂತಿಗೆ ಇದಿಷ್ಟು ಸಾಕು. ಮುಂದಿನ ಕಂತಿನಲ್ಲಿ ಮುಂದುವರಿಯೋಣ....

Friday 27 April, 2007

ಆತ್ಮ ಚಿಂತನ


ಧ್ಯಾನ ಅಥವಾ Meditation ಮನಸ್ಸನ್ನು ಶಾಂತವಾಗಿಸುವ ಹಲವು ಹಾದಿಗಳಲ್ಲಿ ಒಂದು. ನನ್ನ ಮಟ್ಟಿಗೆ ಧ್ಯಾನ ಯಾವುದೇ ಯೋಚನೆಯಿಲ್ಲದ, ಭಾವನೆಯಿಲ್ಲದ, ಚಿಂತೆಯಿಲ್ಲದ, ಮುಕ್ತ ಸ್ಥಿತಿ. ಈ ನಿರ್ಲಿಪ್ತ ಸ್ಥಿತಿಯಲ್ಲಿ ಮನಸ್ಸು ಬುದ್ಧಿ ಒಂದಾಗಿ ಅಂತರ್ಮುಖಿಯಾಗಿ ಆತ್ಮವಿಮರ್ಶೆಗೆ ತೊಡಗಿಕೊಳ್ಳಬೇಕು. ಅಂಥ ಮೌನ ದಿನಕ್ಕೊಮ್ಮೆ ಇರಬೇಕು. ನಮ್ಮತನದ ಗುಣಗಳನ್ನು ಒರೆಗೆ ಹಚ್ಚಬೇಕು. ಇನ್ನೂ ಬೆಳೆಯುವ ಹಾದಿಯತ್ತ ನೋಟ ಹರಿಸಬೇಕು. ಇಂಥ ಹಲವಾರು ಬೇಕುಗಳಿಗೆ ದಾರಿ ಕಾಣಿಸಿದ್ದು ನನ್ನ ಇತ್ತೀಚಿನ ಓದು. ಆತ್ಮದ ಬಗೆಗಿನ, ಪುನರ್ಜನ್ಮದ ಬಗೆಗಿನ, ಕರ್ಮ ಸಿದ್ಧಾಂತದ ಬಗೆಗಿನ ವೈಜ್ಞಾನಿಕ ಮಾಹಿತಿಯ ಓದು. ಇವನ್ನೆಲ್ಲ ಪುಟ್ಟ ಪುಟ್ಟ ತುತ್ತುಗಳಾಗಿ ನನ್ನ ಅಂಗಳದಲ್ಲಿ ಬಿಡಿಸಿಡುತ್ತೇನೆ. ಆಸಕ್ತ ಹಕ್ಕಿಗಳು ಕಾಳು ಹೆಕ್ಕಿಕೊಳ್ಳಿ.