ಇನ್ನೊಂದು ಅಕ್ಷರಂಗಳ

"ಹರಿವ ಲಹರಿ"ಯ ಹಾದಿ->->->

ಹೀಗೊಂದು ಯೋಚನೆ:

*ಪರಿಪೂರ್ಣತೆಯೆಂದರೆ ಮುಕ್ತಾಯ; ಹಾದಿಯ ಕೊನೆ.*

Wednesday 2 March, 2011

ಹಿಪ್ನೋಥೆರಪಿ-ಭಾಗ-೦೩

ಹಿಪ್ನೋಥೆರಪಿ ಮತ್ತು ಹಿಂದೂ ಆತ್ಮ

ಈ ಹಿಪ್ನೋಥೆರಪಿಯ ಬಗ್ಗೆ ನನಗೆ ಮೊದಲಾಗಿ ಅರಿವಿಗೆ ಬಂದದ್ದು ೨೦೦೬ರ ಎಪ್ರಿಲ್ ತಿಂಗಳಲ್ಲಿ ಗೆಳೆಯರೊಬ್ಬರು ಓದಲು ಕೊಟ್ಟ ಡಾ. ಮೈಕೆಲ್ ನ್ಯೂಟನ್‌ರ "ಜರ್ನಿ ಆಫ಼್ ಸೋಲ್ಸ್" (ಲೆವೆಲ್ಲಿನ್ ಪಬ್ಲಿಕೇಷನ್ಸ್, ೧೯೯೪) ಪುಸ್ತಕದಿಂದ. ತದನಂತರ ಸಾಲಾಗಿ ಓದಿದ್ದು ಡಾ. ಬ್ರಯಾನ್ ವೈಸ್‌ರ "ಮೆನಿ ಲೈವ್ಸ್, ಮೆನಿ ಮಾಸ್ಟರ್ಸ್" (ಫ಼ಯರ್‌ಸೈಡ್, ೧೯೮೮), "ತ್ರೂ ಟೈಮ್ ಇನ್‌ಟು ಹೀಲಿಂಗ್" (ಫ಼ಯರ್‌ಸೈಡ್, ೧೯೯೨), "ಓನ್ಲೀ ಲವ್ ಈಸ್ ರಿಯಲ್" (ವಾರ್ನರ್ ಬುಕ್ಸ್, ೧೯೯೭), "ಮೆಸೇಜಸ್ ಫ಼್ರಮ್ ದ ಮಾಸ್ಟರ್ಸ್" (ವಾರ್ನರ್ ಬುಕ್ಸ್, ೨೦೦೦), "ಸೇಮ್ ಸೋಲ್, ಮೆನಿ ಬಾಡೀಸ್" (ಫ಼್ರೀ ಪ್ರೆಸ್, ೨೦೦೫), ಹಾಗೂ ಡಾ. ಮೈಕೆಲ್ ನ್ಯೂಟನ್‌ರ "ಡೆಸ್ಟಿನಿ ಆಫ಼್ ಸೋಲ್ಸ್" ಮತ್ತು "ಲೈಫ಼್ ಬಿಟ್ವೀನ್ ಲೈವ್ಸ್" (ಲೆವೆಲ್ಲಿನ್ ಪಬ್ಲಿಕೇಷನ್ಸ್, ೨೦೦೦, ೨೦೦೪). ಇವೆಲ್ಲ ಓದು ನಮ್ಮ ಹಿಂದೂ ಸಂಸ್ಕೃತಿಯ ಆತ್ಮವನ್ನು ಪಾಶ್ಚಾತ್ಯ ಕನ್ನಡಕದಲ್ಲಿ ತೋರಿಸಿದವು ಎಂದರೆ ತಪ್ಪಾಗಲಾರದು. ಹಿಪ್ನೋಥೆರಪಿಗೂ ಆತ್ಮಕ್ಕೂ ತೀರಾ ಹತ್ತಿರದ ನಂಟು ಇಲ್ಲಿ ಕಂಡುಬಂತು.

ಡಾ. ನ್ಯೂಟನ್ (ಕ್ಯಾಲಿಫ಼ೋರ್ನಿಯಾ) ಮತ್ತು ಡಾ. ವೈಸ್ (ಫ಼್ಲೋರಿಡಾ)- ಅಮೆರಿಕದ ಎರಡು ತೀರಗಳಲ್ಲಿ ಮನೋವೈದ್ಯರಾಗಿ ತಮ್ಮ ಕಾರ್ಯಕ್ಷೇತ್ರ ಆರಿಸಿಕೊಂಡವರು. ತಮ್ಮ ಗ್ರಾಹಕರನ್ನು ಸಮ್ಮೋಹನ ಚಿಕಿತ್ಸೆಗೆ ಒಳಪಡಿಸುತ್ತಿರುವವರು. ಇಬ್ಬರೂ ಆಕಸ್ಮಿಕವಾಗಿ ತಮ್ಮ ವೃತ್ತಿಯಲ್ಲಿ ಆತ್ಮದ ತಿಳುವಳಿಕೆ ಪಡೆದವರು. ಗ್ರಾಹಕರು ಇದ್ದಕ್ಕಿದ್ದಂತೆ ಈ ಜನ್ಮದ ಹೊರತಾಗಿ ಪೂರ್ವಜನ್ಮದ ಬಗ್ಗೆ ಮಾತನಾಡತೊಡಗಿದಾಗ ಒಮ್ಮೆಗೆ ಗಾಬರಿಯಾದರೂ ಸುಧಾರಿಸಿಕೊಂಡು ಅದನ್ನು ವಿಶ್ಲೇಷಿಸಿದವರು. ಅದರಲ್ಲಿ ಮತ್ತಷ್ಟು ಆಸಕ್ತಿ ತಾಳಿ, ಆ ಹಾದಿಯಲ್ಲೇ ಕ್ರಮಿಸಿ (ಶ್ರಮಿಸಿ), ವೈಜ್ಞಾನಿಕವಾಗಿ ಆತ್ಮದ ಬಗ್ಗೆ ವಿವರಗಳನ್ನು ಕಲೆಹಾಕಿ ಪುಸ್ತಕ ರೂಪಕ್ಕಿಳಿಸಿದವರು. ಇಬ್ಬರ ಅಭಿಪ್ರಾಯದಲ್ಲೂ ನಮ್ಮ ಆತ್ಮದಲ್ಲಿ ಪೂರ್ವಜನ್ಮದ ನೆನಪುಗಳು ಹುದುಗಿರುತ್ತವೆ.

ಪ್ರಜ್ಞೆ- ಅಪ್ರಜ್ಞೆ- ಸುಪ್ತಪ್ರಜ್ಞೆ- ಅತೀಂದ್ರಿಯ ಪ್ರಜ್ಞೆ (ಆಳವಾದ ಸಮ್ಮೋಹಿತ ಸ್ಥಿತಿ) -- ಮಾನವ ಪ್ರಜ್ಞೆಯ ವಿವಿಧ ನೆಲೆಗಳು. ಇವುಗಳಲ್ಲಿ ಪ್ರಜ್ಞೆ, ಸುಪ್ತಪ್ರಜ್ಞೆ, ಮತ್ತು ಅಪ್ರಜ್ಞೆಗಳು ಸಾಮಾನ್ಯವಾಗಿ ಎಲ್ಲರಿಗೂ ತಿಳಿದವುಗಳೇ. ಇನ್ನುಳಿದ ‘ಅತೀಂದ್ರಿಯ ಪ್ರಜ್ಞೆ’ ನಮ್ಮ ಆತ್ಮದ ನೆಲೆ. ವ್ಯಕ್ತಿ ಸಮ್ಮೋಹಿತನಾದಾಗ ಸಾಮಾನ್ಯವಾಗಿ ಇಷ್ಟು ಆಳವಾದ ಪ್ರಜ್ಞೆಯ ನೆಲೆಗೆ ಇಳಿಯುವುದಿಲ್ಲ. ಬಹುತೇಕ ಸಮ್ಮೋಹನ ಚಿಕಿತ್ಸೆಯಲ್ಲಿ ಇದೇ ಜೀವನದ ವಿವಿಧ ಸ್ತರಗಳ ಬೇನೆ-ಬೇಸರಗಳ ನೆಲೆಗಳನ್ನು ಅಗೆದು ತೆಗೆದು, ವಿವರವಾಗಿ ವಿಶ್ಲೇಷಿಸಿ ಅದನ್ನು ನೋವಿನ ನೆಲೆಯಿಂದ ಹೊರತುಗೊಳಿಸಿ, ಆಳವಾದ ಪ್ರಜ್ಞಾಸ್ತರದ ಘಾಸಿಗಳನ್ನು ವಾಸಿಮಾಡುವ ಪ್ರಯತ್ನ ನಡೆಯುತ್ತದೆ. ಆದರೆ, ಡಾ. ನ್ಯೂಟನ್ ಮತ್ತು ಡಾ. ವೈಸ್ ಹೇಳುವಂತೆ "ಪಾಸ್ಟ್ ಲೈಫ಼್ ರಿಗ್ರೆಷನ್ ಥೆರಪಿ"ಯಲ್ಲಿ ವ್ಯಕ್ತಿ ತನ್ನ ಬೇನೆ-ಬೇಸರಗಳಿಗೆ ಪೂರ್ವಜನ್ಮದ ಕಾರಣಗಳಿದ್ದರೂ ಅದನ್ನೂ ಕಂಡುಕೊಂಡು ವಾಸಿ ಮಾಡಿಕೊಳ್ಳಬಹುದು. ಮುಂದೆ ನೆಮ್ಮದಿಯ ಜೀವನ ನಡೆಸಬಹುದು.

ಈ ಮನೋವೈದ್ಯರಿಬ್ಬರೂ ತಮ್ಮ ಗ್ರಾಹಕರನ್ನು ಸಮ್ಮೋಹನಕ್ಕೆ ಒಳಪಡಿಸುವ ಮೊದಲು ಸಂದರ್ಶನದ ಮೂಲಕ ಅವರ ಪರಿಸ್ಥಿತಿಯ ಪರಿಚಯ ಮಾಡಿಕೊಳ್ಳುತ್ತಾರೆ. ಬಹುತೇಕ ಗ್ರಾಹಕರು ಇತರ ವೈದ್ಯಕೀಯ ಮತ್ತು ಮನೋವೈಜ್ಞಾನಿಕ ಶುಶ್ರೂಷೆಯನ್ನು ಪಡೆಯಲು ಪ್ರಯತ್ನಿಸಿದವರೇ. ಅದರಿಂದ ಪ್ರಯೋಜನ ದೊರಕದೆ ಇವರಲ್ಲಿ ಬಂದವರು. ಇವರುಗಳಿಗೆ ರಿಗ್ರೆಷನ್ ಮಾಡುತ್ತಾ ಒದಗಿದ ಮಾಹಿತಿಗಳಿಂದ, ಡಾ. ನ್ಯೂಟನ್ ತಮ್ಮ ಪುಸ್ತಕಗಳಲ್ಲಿ ಆತ್ಮದ ಸ್ವರೂಪ, ಆತ್ಮಗಳ ಲೋಕ, ಆತ್ಮಗಳ ಕಲಿಕೆ, ಮತ್ತು ಆತ್ಮಜ್ಞಾನದ ಹಂತಗಳನ್ನು ವಿವರಿಸುತ್ತಾರೆ. ಡಾ. ವೈಸ್, ತಮ್ಮ ಗ್ರಾಹಕರಿಗೆ ಶಾಂತಿ, ನೆಮ್ಮದಿ, ಸೌಖ್ಯ ನೀಡುವ "ಪಾಸ್ಟ್ ಲೈಫ಼್ ರಿಗ್ರೆಷನ್ ಥೆರಪಿ"ಯನ್ನೇ ತಮ್ಮ ವೃತ್ತಿಯನ್ನಾಗಿಸಿಕೊಂಡಿದ್ದಾರೆ. ರಿಗ್ರೆಷನ್ ಶಿಬಿರಗಳನ್ನೂ ಸಾಮೂಹಿಕ ಕಾರ್ಯಾಗಾರಗಳನ್ನೂ ನಡೆಸುತ್ತಿದ್ದಾರೆ.

ಡಾ. ನ್ಯೂಟನ್ ವಿವರಿಸುವಂತೆ (ಅವರ ಗ್ರಾಹಕರು ಸಮ್ಮೋಹಿತ ಸ್ಥಿತಿಯಲ್ಲಿ ತಾವು ಕಂಡುದನ್ನು ತಿಳಿಸಿದ ಆಧಾರದಲ್ಲಿ), ನಮ್ಮ ಆತ್ಮ ಶಕ್ತಿ ಸ್ವರೂಪ. ಅದಕ್ಕೆ ಮುಖ, ಕಣ್ಣು-ಕೈ-ಕಾಲು, ದೇಹ... ಏನೂ ಇಲ್ಲ. ಬರೇ ಬೆಳಕಿನ ಪುಟ್ಟ ಗೋಳದಂಥಾದ್ದು. ನಮ್ಮ ಆತ್ಮದ ಜ್ಞಾನದ ಆಳವನ್ನವಲಂಬಿಸಿ ಆ ಬೆಳಕಿನ ಗೋಳದ ಬಣ್ಣವಿರುತ್ತದೆ. ಅನನುಭವಿ, ಮೊದಲ ಹಂತದ ಆತ್ಮ ಪೂರ್ಣ ಬಿಳಿ ಬಣ್ಣದ್ದಾದರೆ, ಹಂತ ಹಂತವಾಗಿ ಕಿತ್ತಳೆ, ಹಳದಿ, ಹಸುರು, ನೀಲಿ, ನೇರಳೆ ಬಣ್ಣಗಳವರೆಗಿನ ಆತ್ಮಗಳ ಅಸ್ತಿತ್ವ ಅವರ/ಗ್ರಾಹಕರ ಅನುಭವಕ್ಕೆ ಬಂದಿದೆಯೆನ್ನುತ್ತಾರೆ. ಒಂದು ಆತ್ಮ ತನ್ನ ಭೌತಿಕ ದೇಹದಿಂದ ಹೊರಬಿದ್ದೊಡನೆ, ಆ ಆತ್ಮಗತ ಜ್ಞಾನವನ್ನು ಅವಲಂಬಿಸಿ, ಆತ್ಮಲೋಕ (ಸ್ಪಿರಿಟ್/ಸೋಲ್ ವರ್ಲ್ಡ್) ತಲುಪುತ್ತದೆ. ಕೆಲವು ಕಿರಿಯ/ಎಳೆಯ ಅಥವಾ ಅನನುಭವಿ ಆತ್ಮಗಳು ಗಲಿಬಿಲಿಗೊಂಡು ಭೂಮಿಯ ವಾಯುವಲಯದಲ್ಲೇ ಕೆಲಕ್ಷಣಗಳ ಕಾಲ ಸುತ್ತುತ್ತಿರಬಹುದು. ಆಗ ಅಂಥಾ ಆತ್ಮದ ಗುರುಸ್ಥಾನದಲ್ಲಿರುವ ಆತ್ಮ, ಭೌತಿಕ ದೇಹದಲ್ಲಿದ್ದಾಗ ಹತ್ತಿರದ ಸಂಬಂಧಿಕರಾಗಿದ್ದವರ ಆತ್ಮ, ಈ ಆತ್ಮವನ್ನು ಹದವಾದ ಸೆಳೆತಕ್ಕೊಳಪಡಿಸಿ ನಿಜನೆಲೆಯಾದ ಆತ್ಮಲೋಕದ ಕಡೆಗೆ ಕರೆಸಿಕೊಳ್ಳುತ್ತವೆ. ಸ್ವಲ್ಪ ಅನುಭವವಿರುವ ಆತ್ಮ (ಹಲವಾರು ಜನ್ಮಗಳನ್ನೆತ್ತಿದ ಆತ್ಮ, ಹಲವು ಬಾರಿ ಪ್ರಯಾಣ ಮಾಡಿದವರಂತೆ) ತನ್ನ ಮನೆಯತ್ತ ತಾನೇ ಪಯಣಿಸುತ್ತದೆ. ಬಹುತೇಕ ಆತ್ಮಗಳು ಭೌತಿಕ ಸಾವಿನ ಬಳಿಕ "ಒಂದು ಬೆಳಕಿನ ಕೊಳವೆಯೊಳಗೆ ವೇಗವಾಗಿ ಸಾಗಿದ" ಅನುಭವ ಪಡೆಯುತ್ತವೆ.

ಡಾ. ವೈಸ್ ತಮ್ಮ ಪುಸ್ತಕಗಳಲ್ಲಿ ಆತ್ಮಲೋಕದ ಬದಲಾಗಿ ಆತ್ಮಗಳ ಬಗೆಗೇ ತಿಳಿಸುತ್ತಾರೆ. ಗುರು/ಗೈಡ್ ಆತ್ಮಗಳ ಬಗ್ಗೆ ಬರೆಯುತ್ತಾರೆ. ಸಮ್ಮೋಹನದಲ್ಲಿರುವ ತಮ್ಮ ಗ್ರಾಹಕರು ಗೈಡ್ ನೀಡುವ ಸಂದೇಶಗಳನ್ನು ತಮಗರಿವಿಲ್ಲದೆಯೇ ಅರುಹುವುದನ್ನು ಬರೆಯುತ್ತಾರೆ. ಎರಡು ಜನ್ಮಗಳ ನಡುವೆ ಆತ್ಮ ಪುನಶ್ಚೇತನಗೊಳ್ಳುವ ಲೋಕದ ಬಗ್ಗೆ ಇಲ್ಲಿ ಹೆಚ್ಚು ಮಾತಿಲ್ಲ. ನಮ್ಮ ಹಿಂದಿನ ಜೀವನ ಹೇಗಿತ್ತು, ಮುಂದಿನದು ಹೇಗಿರಬಲ್ಲುದು ಎನ್ನುವುದರ ಸುತ್ತಲೇ ಅವರ ಕೆಲಸ. ಅವರ ಪ್ರಕಾರ ಎಲ್ಲ ಆತ್ಮಗಳೂ ಒಂದೇ; ಅನುಭವದ ಆಳಗಳು ಬೇರೆಬೇರೆ, ಅಷ್ಟೇ. ಬಣ್ಣಗೋಳಗಳ ಬಗ್ಗೆ ಅವರು ತಿಳಿಸುವುದಿಲ್ಲ, ಚೇತನದತ್ತ ಅವರ ಗಮನ. ಸ್ವಸಮ್ಮೋಹನದ ಬಗ್ಗೆಯೂ ಡಾ. ವೈಸ್ ತಿಳಿಸುತ್ತಾರೆ; ಮೆಡಿಟೇಷನ್, ಧ್ಯಾನ, ಏಕಾಗ್ರತೆಯನ್ನು ಅಭ್ಯಸಿಸಲು ಹೇಳುತ್ತಾರೆ. ನಿದ್ದೆ-ಎಚ್ಚರಗಳ ನಡುವಿನ ಸ್ಥಿತಿಯಲ್ಲಿನ ಕನಸುಗಳನ್ನು ನೆನಪಿರಿಸಿಕೊಂಡು ಅವನ್ನು ಗುರುತು ಹಾಕಿಕೊಂಡು ಒಂದು ಸೂತ್ರದಲ್ಲಿ ಹೆಣೆಯಲಾಗುತ್ತದೆಯೋ ನೋಡಿ, ಅನ್ನುತ್ತಾರೆ. ಅಗಲಿದ ಆತ್ಮೀಯರಿಂದ ಸಂದೇಶಗಳು ಬರಬಹುದು, ಬರುತ್ತವೆ; ಮನಸ್ಸು ಮುಕ್ತವಾಗಿರಲಿ, ಎಂದು ಸಾರುತ್ತಾರೆ.
(ಭಾಮಿನಿ, ಫ಼ೆಬ್ರವರಿ ೨೦೧೧)

4 comments:

ಚುಕ್ಕಿಚಿತ್ತಾರ said...

interesting.....

sunaath said...

ಇನ್ನಿಷ್ಟು ವಿವರಗಳನ್ನು ಕೊಡುವಿರಾ? ಕೆಲವೊಂದು caseಗಳ ಮೂಲಕ ತಿಳಿಸಬಹುದೆ?

ಶಾನಿ said...

ಮುಂದಿನ ಕಂತಿಗೆ ಕಾಯುತ್ತಿದ್ದೇನೆ

ಸುಪ್ತದೀಪ್ತಿ suptadeepti said...

ಚುಕ್ಕಿಚಿತ್ತಾರ,ಕಾಕಾ, ಶಾನಿ, ಧನ್ಯವಾದಗಳು.

ಕಾಕಾ, ನಿಮಗೆ ಯಾವ ವಿಷಯದ ಬಗ್ಗೆ ವಿವರ ಬೇಕಾಗಿದೆ? ಮುಂದಿನ ಕಂತಿನಲ್ಲಿನ ವಿವರಗಳು ನಿಮ್ಮ ಪ್ರಶ್ನೆಗಳನ್ನು ಉತ್ತರಿಸುತ್ತವೆಯೋ ನೋಡಿ. ಇಲ್ಲವಾದಲ್ಲಿ ಪತ್ರಿಸುವಿರಾ? ಲೇಖನದ ಪದಮಿತಿಯಲ್ಲಿ ಎಲ್ಲ ವಿವರಗಳನ್ನೂ ಬರೆಯಲಾಗಿಲ್ಲ.