ಇನ್ನೊಂದು ಅಕ್ಷರಂಗಳ

"ಹರಿವ ಲಹರಿ"ಯ ಹಾದಿ->->->

ಹೀಗೊಂದು ಯೋಚನೆ:

*ಪರಿಪೂರ್ಣತೆಯೆಂದರೆ ಮುಕ್ತಾಯ; ಹಾದಿಯ ಕೊನೆ.*

Monday 11 June, 2007

ಆತ್ಮ ಚಿಂತನ-೦೩

ಆತ್ಮಕ್ಕಿರುವ ಜ್ಞಾನ/ಅನುಭವದ ಆಧಾರದ ಮೇಲೆ, ಡಾ ನ್ಯೂಟನ್ ಅವರ ತಿಳುವಳಿಕೆಗೆ ಬಂದಿರುವಂತೆ ಆರು ಸ್ತರಗಳಲ್ಲಿ ವಿಭಾಗಿಸುತ್ತಾರೆ; ನಮ್ಮ ಅರ್ಥೈಸುವಿಕೆಯ ಅನುಕೂಲಕ್ಕಾಗಿ ಈ ವಿಂಗಡಣೆ ಎನ್ನುತ್ತಾರೆ.

(೧) ಮೊದಲ ಹಂತ (ಆರಂಭಿಕ/ ಬಿಗಿನರ್): ಈ ಸ್ತರದ ಆತ್ಮಗಳು ಬಹಳಷ್ಟು ಜನ್ಮ ಎತ್ತಿಲ್ಲದಿರಬಹುದು, ಅಥವಾ ಹಲವಾರು ಜನ್ಮಗಳನ್ನು ಎತ್ತಿದ್ದರೂ ಕಲಿಯಬೇಕಾದ ಪಾಠ ಕಲಿಯದೇ ಇರಬಹುದು (ಫ್ರೀ-ವಿಲ್ ಅನ್ನುವುದೊಂದಿದೆಯಲ್ಲ! ಅದು ಅತೀಂದ್ರಿಯ ಪ್ರಜ್ಞೆಗೂ ಸಂಬಂಧಿಸಿದ್ದು). ಪ್ರಪಂಚದ ಬಹುತೇಕ ಜನ ಇದೇ ಹಂತದಲ್ಲಿರುವ ಆತ್ಮರೂಪರು ಎನ್ನುವುದು ಅವರ ಅಂದಾಜು. ಈ ಆತ್ಮಗಳ ಬಣ್ಣ ಶುದ್ಧ ಬಿಳಿ. ಜ್ಞಾನ ಹೆಚ್ಚಿದಂತೆಲ್ಲ ಬಣ್ಣ ಗಾಢವಾಗುತ್ತದೆ.

(೨) ಎರಡನೇ ಹಂತ (ಕೆಳ-ಅಂತರ್ವರ್ತಿ/ ಲೋವರ್ ಇಂಟರ್ಮೀಡಿಯೇಟ್): ಹಲವಾರು ಜನ್ಮಗಳನ್ನೆತ್ತಿ, ಕೆಲವಾದರೂ ಪಾಠಗಳನ್ನು ಕಲಿತು, ಮಾಗಿರುವ ಆತ್ಮಗಳಿವು. ನಯ-ವಿನಯ ಇವರುಗಳಲ್ಲಿ ತುಸುವಾದರೂ ಇರುತ್ತದೆ. ಸಾಮಾಜಿಕ ಕಾಳಜಿ ಒಂದಿನಿತು ಮೈಗೂಡಿರುತ್ತದೆ. ಇಲ್ಲಿ ಬಿಳಿಗೆ ಒಂದಿಷ್ಟೇ ಇಷ್ಟು ಹಳದಿ ಯಾ ಕೆಂಪು ಬಣ್ಣದ ಛಾಯೆಯಿರುತ್ತದೆ.

(೩) ಮೂರನೇ ಹಂತ (ಅಂತರ್ವರ್ತಿ/ ಇಂಟರ್ಮೀಡಿಯೇಟ್): ಸಮಾಜಕ್ಕಾಗಿ, ಇತರರಿಗಾಗಿ ತಮ್ಮ ಜನ್ಮ ಸವೆಸುವವರು. ಇವರುಗಳ ಆತ್ಮ ಹಳದಿ, ಬಿಳಿಯ ಛಾಯೆಯೇ ಇರುವುದಿಲ್ಲ.

(೪) ನಾಲ್ಕನೇ ಹಂತ (ಮೇಲಂತರ್ವರ್ತಿ/ ಹೈಯರ್ ಇಂಟರ್ಮೀಡಿಯೇಟ್): ಕಡು ಹಳದಿಯಿಂದ ಕೊನೆಗೆ ತುಸು ನೀಲಿಗೆ ತಿರುಗುವ ಈ ಆತ್ಮಗಳ ಗುಣ ಬಹಳಷ್ಟು ನಿಸ್ವಾರ್ಥ ಮತ್ತು ಸಮಾಜಮುಖಿ. ಈ ನೆಲೆಯ ಆತ್ಮಗಳು ಗುರುಗಳಾಗುವ ತರಬೇತಿಯಲ್ಲಿ ಇರುತ್ತಾರೆ (ಜೂನಿಯರ್ ಗೈಡ್).

(೫) ಐದನೇ ಹಂತ (ಪ್ರೌಢ/ ಅಡ್ವಾನ್ಸ್ಡ್): ತೆಳು ನೀಲಿ ಬಣ್ಣದಿಂದ ಗುರುತಿಸಲ್ಪಡುವ ಈ ಆತ್ಮಗಳು ಗುರುಗಳಾಗಿರುತ್ತಾರೆ (ಸೀನಿಯರ್ ಗೈಡ್). ಈ ಸ್ತರದ ಆತ್ಮಗಳಿಗೆ ಉದಾಹರಣೆ ಹೇಳುವುದಾದರೆ- ಮಹಾತ್ಮ ಗಾಂಧಿ ಮತ್ತು ಮದರ್ ತೆರೇಸಾ. ಬೇರೆ ವಿವರಣೆ ಬೇಕಾ?

(೬) ಆರನೇ ಹಂತ (ಅತಿ-ಪ್ರೌಢ/ ಹೈಲೀ ಅಡ್ವಾನ್ಸ್ಡ್): ಕಡು ನೇರಳೆ ಬಣ್ಣದ ಜೊತೆಗೆ ಬೆಳಕಿನ ಪರಿವೃತ್ತ ಈ ಹಂತದ ಗುರುತು. ಈ ನೆಲೆಯ ಆತ್ಮಗಳು ಪರಿಣತ ಗುರುಗಳಾಗಿರುತ್ತಾರೆ (ಮಾಸ್ಟರ್ ಗೈಡ್). ಬಹುಶಃ ಬುದ್ಧ ಮತ್ತು ಏಸುವನ್ನು ಇಲ್ಲಿರಿಸಬಹುದೇನೋ.

ಡಾ ನ್ಯೂಟನ್ನರ ತಿಳುವಳಿಕೆಗೆ ಬಂದಿರುವ ಆತ್ಮಗಳ ಪರಿಚಯಾತ್ಮಕ ವಿವರಣೆಯಷ್ಟೇ ಇದಾಗಿದೆ. ಇದೇ ಇದಮಿತ್ಥಂ ಅಂತೇನೂ ಅಲ್ಲ. ಆರನೇ ಹಂತವನ್ನೂ ಮೀರಿದ, ಇನ್ನೂ ಹೆಚ್ಚಿನ ಜ್ಞಾನ ಪಡೆದ ಆತ್ಮಗಳಿರಲೇಬೇಕು; ಆದರೆ ಅವೆಲ್ಲ ಪುನರ್ಜನ್ಮ ಪಡೆಯದಿರಬಹುದು, ಅಥವಾ ಮನೋವೈದ್ಯಕೀಯ ನೆರವು ಪಡೆಯಲು ಡಾ ನ್ಯೂಟನ್ನರಲ್ಲಿಗೆ ಬಂದಿರುವವರಿಗೆ ಆ ಉನ್ನತ ಮಟ್ಟದ ಆತ್ಮಗಳ ಪರಿಚಯ ಇಲ್ಲದೇ ಇರಬಹುದು. ಅಂತೂ "ನನ್ನ ಅರಿವಿಗೆ ಬಂದಿದ್ದು ಇಷ್ಟೇ, ಇದಕ್ಕೂ ಮೇಲಿನ ಸ್ತರಗಳಿವೆ ಅನ್ನುವುದರಲ್ಲಿ ಸಂಶಯವಿಲ್ಲ" ಅನ್ನುವುದು ಅವರ ಅರಿಕೆ.

ಎಲ್ಲ ಆತ್ಮಗಳ ಗುರಿ ಪರಿಪೂರ್ಣತೆಯನ್ನು ಸಾಧಿಸುವುದು. ಜ್ಞಾನದ ಆಗರವಾಗಿರುವ, ತೇಜಸ್ಸಿನ ಸ್ರೋತವಾಗಿರುವ, ಎಲ್ಲ ಇರುವಿಕೆಗಳ ಕಾರಣವಾಗಿರುವ, ಪೂರ್ಣತೆಯ ಕೇಂದ್ರ ಶಕ್ತಿಯನ್ನು ಕೂಡಿಕೊಳ್ಳುವುದು ಆತ್ಮದ ಕಲಿಕೆಯ ಉದ್ದೇಶ. ಜ್ಞಾನಾರ್ಜನೆಯಿಂದಲೇ ಅದು ಸಾಧ್ಯ. ಮಾನವ ಜನ್ಮ ಅದಕ್ಕಿರುವ ಉತ್ತಮ (ಸುಲಭದ್ದಲ್ಲ!) ಮಾರ್ಗ. ಈ ಎಲ್ಲ ಮಾತುಗಳು ಭಾರತೀಯರಾದ ನಮಗೆ ಹೊಸದಲ್ಲ. ಇವನ್ನೇ ಡಾ ನ್ಯೂಟನ್ನರ ಪುಸ್ತಕದಲ್ಲಿ ಆತ್ಮಗಳೊಂದಿಗಿನ ಸಂಭಾಷಣೆಯಲ್ಲಿ ಓದಿದಾಗ ಆದ ಅನುಭೂತಿ ಮಾತ್ರ ಹೊಸದು.