ಇನ್ನೊಂದು ಅಕ್ಷರಂಗಳ

"ಹರಿವ ಲಹರಿ"ಯ ಹಾದಿ->->->

ಹೀಗೊಂದು ಯೋಚನೆ:

*ಪರಿಪೂರ್ಣತೆಯೆಂದರೆ ಮುಕ್ತಾಯ; ಹಾದಿಯ ಕೊನೆ.*

Thursday 22 May, 2008

ಒಂದು ಬಿನ್ನಹ:

ಪ್ರಿಯ ಓದುಗರೇ,
"ಹರಿವ ಲಹರಿ"ಯೆಂಬ ಹೆಸರಿದ್ದ ಈ ಬ್ಲಾಗ್ ಈಗ ಹೊಸ ನಾಮಕರಣ ಹೊಂದಿದೆ. ಇದೀಗ "ಸುಪ್ತದೀಪ್ತಿ Inner Light" ಎನ್ನುವ ಹೊಸ ರೂಪದಿಂದ ಮುಂದುವರಿಯಲಿದೆ. ಈ ಅಂಗಳ ಇನ್ನು ಮುಂದೆ "ನಮ್ಮ-ನಿಮ್ಮೊಳಗೆ" ಮತ್ತು "ಆತ್ಮಚಿಂತನ"ದಂಥ ಮಾಹಿತಿ ಸಂವಹನಕ್ಕೆ ಮತ್ತು ಚರ್ಚೆಗೆ ಸೀಮಿತ.

ಇಲ್ಲಿ ಹರಿದಾಡುತ್ತಿದ್ದ ಲಹರಿಯ ಹರಿವನ್ನು ಹೊಸದೊಂದು ಅಂಗಳಕ್ಕೆ ತಿರುಗಿಸಲಾಗಿದೆ. ಕವನ, ಕಥೆ, ಹರಟೆ, ಲೇಖನ, ಪ್ರಬಂಧ- ಇವೆಲ್ಲ ಸಾಹಿತ್ಯಿಕ ಬರಹಗಳು ಅಲ್ಲಿ ಉಸಿರಾಡುತ್ತಿವೆ, ಬೆಳಕು ಕಾಣಲಿವೆ. ನಿಮ್ಮ "ಹರಿವ ಲಹರಿ" ಅಲ್ಲಿಯೂ ಸಶಕ್ತವಾಗಿ ಹರಿಯುವಂತೆ ಪ್ರೋತ್ಸಾಹಿಸುವಿರಾಗಿ ನಂಬಿಕೆ.

ಈ ಅಂಗಳಕ್ಕೆ ಅಲ್ಲಿಂದಲೂ, ಅಲ್ಲಿಗೆ ಇಲ್ಲಿಂದಲೂ ಸುಲಭದಲ್ಲೇ ಕಾಣುವಂತೆ ಮುಖ್ಯಪುಟದಲ್ಲಿಯೇ ಕೊಂಡಿಗಳೂ ಇವೆ.

ಬನ್ನಿ, ಓದಿ, ಪ್ರತಿಕ್ರಿಯಿಸಿ; ಎರಡೂ ಅಂಗಳಗಳಲ್ಲಿ ನಿಮ್ಮ ಹೆಜ್ಜೆ ಗುರುತುಗಳಿರಲಿ.

Thursday 1 May, 2008

ನಮ್ಮ-ನಿಮ್ಮೊಳಗೆ-೦೩

ಸಂದೇಹ-೦೧: ಶುಭದಾಳಿಂದ:
"ನನಗೆ ಹಿಪ್ನೋಸಿಸ್ ಥೆರಪಿಯ ಬಗೆಗೇ ಹೆಚ್ಚಿನ ಮಾಹಿತಿ ಕೊಡುತ್ತೀರಾ? ಸಮ್ಮೋಹನದಲ್ಲಿದ್ದಾಗ ವ್ಯಕ್ತಿ ಪೂರ್ವಸ್ಮೃತಿಯನ್ನು ತಂದುಕೊಳ್ಳುವುದು ಹೇಗೆ ಸಾಧ್ಯವಾಗುತ್ತದೆ?"

ಸಂದೇಹ-೦೨: ಯು.ಆರ್.ಭಟ್ (ರಾಜೆಂದ್ರ)ರಿಂದ:
"ಹಿಪ್ನೊಸಿಸ್ ಥೆರಪಿ, ಅಥವಾ ಪಾಸ್ಟ್ ಲೈಫ್ ರಿಗ್ರೆಷನ್‍ಗಳಿಂದ ತಂದುಕೊಳ್ಳುವ ಹಳೆಯ ಘಟನೆಗಳ ನೆನಪುಗಳು... ಪ್ರಸ್ತುತ ಜೀವನದಲ್ಲಿನ ಮನೋವ್ಯಥೆಗಳನ್ನು ನಿವಾರಿಸಲು ಯಾವ ರೀತಿಯಲ್ಲಿ ಕಾರಣವಾಗುತ್ತವೆ..?"

ಪ್ರತಿಕ್ರಿಯೆ: ಇವೆರಡೂ ಪ್ರಶ್ನೆಗಳು ಒಂದಕ್ಕೊಂದು ಪೂರಕವಾದ್ದರಿಂದ ಒಟ್ಟಿಗೇ ಉತ್ತರಿಸುವ ಪ್ರಯತ್ನ ಮಾಡುತ್ತೇನೆ.
ಮೊದಲ ಪ್ರಶ್ನೆಗೆ ಪೂರ್ವಭಾವಿ ಉತ್ತರವಾಗಿ ಸ್ಮೃತಿ/ನೆನಪು ಅಂದರೆ ಏನು, ಎಲ್ಲಿರುತ್ತದೆ, ಹೇಗೆ "ನೆನಪು" ಆಗುತ್ತದೆ, ಎಂಬ ವಿಷಯಗಳನ್ನು ಸಂಕ್ಷಿಪ್ತವಾಗಿ "ನಮ್ಮ-ನಿಮ್ಮೊಳಗೆ -೦೧"ರಲ್ಲಿ ತಿಳಿಸಿದ್ದೇನೆ.

ವ್ಯಕ್ತಿ ರೆಗ್ರೆಷನ್ನಿಗೆ ಒಳಗಾದಾಗ, ಯಾವ ಕಾರಣಕ್ಕಾಗಿ ರೆಗ್ರೆಷನ್ ಬಯಸಿದ್ದಾರೆ ಅನ್ನುವುದರ ಮೇಲೆ ವ್ಯಕ್ತಿಯ ಸಬ್-ಕಾನ್ಷಿಯಸ್ ಮೈಂಡ್ (ಸುಪ್ತ ಪ್ರಜ್ಞೆ) ನೆನಪಿನ ಆಳದ ಪದರಗಳಿಂದ ಬೇಕಾದ ನೆನಪುಗಳನ್ನು ಹೆಕ್ಕಿ ತರುತ್ತದೆ. ಸಮ್ಮೋಹನದಲ್ಲಿದ್ದಾಗ ಕೆಲಸ ಮಾಡುವಂಥದ್ದು ನಮ್ಮ ಸುಪ್ತ ಪ್ರಜ್ಞೆ. ಅಲ್ಲಿಂದ ನೆನಪಿಸಿಕೊಂಡ ವಿಷಯಗಳು, ಚಿಕಿತ್ಸಕನ ಸಂದೇಶಗಳ ಮೇಲೆ ಜಾಗೃತ ಪ್ರಜ್ಞಾವಲಯಕ್ಕೂ ಹಾದು ಬರುತ್ತವೆ (ಚಿಕಿತ್ಸಕನ ಸಂದೇಶವಿಲ್ಲದಿದ್ದಲ್ಲಿ, ಸುಪ್ತಪ್ರಜ್ಞೆಯು ಈ ನೆನಪನ್ನು ಜಾಗೃತವಲಯಕ್ಕೆ ತಂದುಕೊಳ್ಳದಿರುವ ಸಾಧ್ಯತೆಯಿದೆ. ಹಾಗಾದಾಗ ವ್ಯಕ್ತಿಗೆ ಸಮ್ಮೋಹನದಿಂದ ವಾಸ್ತವಕ್ಕೆ ಬಂದಾಗ ಆ "ನೆನಪುಗಳು" ನೆನಪಿರುವುದಿಲ್ಲ). ಆದ್ದರಿಂದ ನೆನಪು ಅನ್ನುವಂಥಾದ್ದು ಜಾಗೃತ ಪ್ರಜ್ಞೆಯ ವಲಯಕ್ಕೆ ಬಂದದ್ದು ಮಾತ್ರವೇ ಆಗಬೇಕಿಲ್ಲ. ನಮ್ಮ ನೆನಪುಗಳೆಲ್ಲ ನಮ್ಮವೇ ಮತ್ತು ಸದಾ ನಮ್ಮ ಪ್ರಜ್ಞೆಯ ಪದರಗಳ ಒಳಗೆ ಹುದುಗಿರುವಂಥವು.

ಈಗಲೂ ನಮ್ಮ ಜೀವನದ ಯಾವುದೋ ಒಂದು ಘಟನೆ, ಒಂದು ಹಾಡಿನ ಗುನುಗು, ಒಂದು ಮಾತಿನ ಎಳೆ, ನಮ್ಮನ್ನು ನಮ್ಮ ಬಾಲ್ಯದ ಮರೆತೇ ಹೋದಂತಿದ್ದ ಕ್ಷಣಗಳನ್ನು ನೆನಪಿಗೆ ತರುತ್ತವಲ್ಲವೆ? ಸಮ್ಮೋಹನದಲ್ಲೂ ಹಾಗೆಯೇ. ಸಮ್ಮೋಹನಕ್ಕೆ ಒಳಗಾದ ಕಾರಣದ ಎಳೆ ಹಿಡಿದು ಅದಕ್ಕೆ ಪೂರಕವಾದ ನೆನಪಿನ ಎಳೆಗಳನ್ನು ಸುಪ್ತಪ್ರಜ್ಞೆ ತನ್ನದೇ ಆಳದ ಪದರಗಳಿಂದ ಮೇಲ್ಪದರಕ್ಕೆ ತಂದುಕೊಂಡು (ನೆನಪಿಸಿಕೊಂಡು), ಅದರಿಂದ ಈಗಿನ ಜೀವನಕ್ಕೆ ಅಗತ್ಯವಾದ ಸಂದೇಶವನ್ನು ಪಡೆದುಕೊಳ್ಳುತ್ತದೆ. ಅಥವಾ ಆಗಿನ ಗೊಂದಲದ ಮೇಲೆಯೇ ಈಗಲೂ ಗೊಂದಲಮಯ ಮನಸ್ಸೇ ಇರುವುದಾದರೆ ಅದನ್ನು ಪರಿಹರಿಸಿಕೊಳ್ಳಬಹುದಾಗಿದೆ (ಇದೀಗ ಎರಡನೇ ಪ್ರಶ್ನೆಯ ವ್ಯಾಪ್ತಿಗೆ ಬಂದೆವು).

ಮೊದಲನೆಯದಾಗಿ, ಸಮ್ಮೋಹನದಲ್ಲಿ ನೆನಪಿಸಿಕೊಳ್ಳುವ ಹಳೆಯ ನೆನಪುಗಳಿಂದ ಪ್ರಸ್ತುತ ಜೀವನದಲ್ಲಿನ ಮನೋವ್ಯಥೆಗಳೆಲ್ಲವೂ ನಿವಾರಣೆಯಾಗುವುದಿಲ್ಲ. ಹಾಗೆಯೇ, ಪ್ರಸ್ತುತ ಮನೋವ್ಯಥೆಗಳೆಲ್ಲವೂ ಪೂರ್ವಸ್ಮೃತಿಗಳ ಮೇಲೆಯೇ ನಿಂತಿರುವುದಿಲ್ಲ. ಕೆಲವೊಂದು ತೊಂದರೆಗಳು, ವ್ಯಥೆಗಳು, ಗೊಂದಲಗಳು, ಪದೇ ಪದೇ ಕಾಡುವ ಕನಸುಗಳು ಪೂರ್ವಸ್ಮೃತಿಯಲ್ಲಿ ಬೇರುಗಳಿರಿಸಿಕೊಂಡಿರುತ್ತವೆ. ಒಂದೆರಡು ನಿದರ್ಶನಗಳ ಮೂಲಕ ಇದನ್ನು ಸುಲಭದಲ್ಲಿ ವಿವರಿಸಬಹುದು.

ನನ್ನದೇ ಸರಳ ಉದಾಹರಣೆ ಕೊಡುತ್ತೇನೆ (ಯಾವುದೇ ಮನೋವ್ಯಥೆಗಳಲ್ಲ, ಅಂಥ ತೊಂದರೆ ಸದ್ಯಕ್ಕಿಲ್ಲ):
(೧) ನನಗೆ ಯಾವಾಗಲೂ ನದಿ, ನೀರು, ಜಲಪಾತಗಳ ಬಗ್ಗೆ ಹಂಬಲ, ಒಲವು, ಒಂಥರಾ ಕುತೂಹಲ, ನೋಡಿದಷ್ಟೂ ತಣಿಯದ ಆಸಕ್ತಿ. ಇದ್ಯಾಕೆ ಹೀಗೆ ಅನ್ನುವ ಪ್ರಶ್ನೆ ನನ್ನನ್ನು ಹಲವಾರು ಬಾರಿ ಕಾಡಿದ್ದಿದೆ. ಉತ್ತರ ಸಿಕ್ಕಿರಲಿಲ್ಲ. ಆಸ್ಟಿನ್'ನಲ್ಲಿ ಡಾ. ವೈಸ್ ನಡೆಸಿದ ರೆಗ್ರೆಷನ್ ಥೆರಪಿ ಕಾರ್ಯಾಗಾರದಲ್ಲಾದ ಅನುಭವದಲ್ಲಿ, ಮತ್ತು ಅದರ ನಂತರದ ಒಂದೆರಡು ದಿನಗಳಲ್ಲಿ ಅರೆ-ಮಂಪರು (ರಾತ್ರೆ ಪೂರ್ತಿನಿದ್ದೆಗೆ ಜಾರುವ ಮೊದಲು ಮತ್ತು ಬೆಳಗ್ಗೆ ಪೂರ್ತಿ ಎಚ್ಚರಾಗುವ ಮೊದಲು) ಸ್ಥಿತಿಯಲ್ಲಿದ್ದಾಗ ಕನಸಿನಂತೆ ತೋರಿಬಂದ ಕೆಲವು ವಿವರಗಳಲ್ಲಿ ನನ್ನ ಪ್ರಶ್ನೆಗೆ ಉತ್ತರ ಸಿಕ್ಕಿದೆ ಅಂದುಕೊಳ್ಳುತ್ತೇನೆ. ಎರಡು ಸಾವಿರ ವರ್ಷಗಳ ಹಿಂದಿನ ಆ ನನ್ನ ಜೀವನದಲ್ಲಿ ನದಿ/ತೊರೆ ಮತ್ತು ಜಲಪಾತ ಅಂದಿನ ಜೀವನದ ಅವಿಭಾಜ್ಯ ಅಂಗವಾಗಿತ್ತು. ನನ್ನ ನೋವು ನಲಿವುಗಳ ಜೊತೆ ಬೆಸೆದುಕೊಂಡ ಬಂಧವಾಗಿತ್ತು. ಹಾಗೂ ಅಂದಿನ ನನ್ನ ಹೆಸರೂ ನೀರಿಗೆ ಸಂಬಂಧಿಸಿದ್ದಾಗಿತ್ತು. ಇವೆಲ್ಲ ಬರೀ ಕಾಕತಾಳೀಯವೇ? ಹಾಗೆಂದೇ ಅಂದುಕೊಂಡರೂ ಆ ನಂತರ ನನ್ನನ್ನು "ನನಗ್ಯಾಕೆ ನೀರಿನ ಮೇಲೆ ಮೋಹ?" ಅನ್ನುವ ಪ್ರಶ್ನೆ ಕಾಡಿಲ್ಲ.

(೨) ಹಲವಾರು ಬಾರಿ, ನಾನು ಗುಹೆಯೊಂದರಲ್ಲಿ ಸಿಕ್ಕಿಕೊಂಡು ಉಸಿರುಗಟ್ಟಿ ಒದ್ದಾಡಿದಂತೆ ಕನಸುಬಿದ್ದು ಕಸಿವಿಸಿಗೊಂಡು, ಗಾಬರಿಗೊಂಡು, ಗಾಳಿಗಾಗಿ ಹಂಬಲಿಸುತ್ತಾ ನಡುರಾತ್ರೆ ಎದ್ದದ್ದಿದೆ. ಹಾಗೆಂದು ಅದು ನನ್ನ ದಿನಗಳ ಸಮತೋಲ ತಪ್ಪಿಸುವಷ್ಟು ತೀವ್ರವಾಗಿರಲಿಲ್ಲ, ಅಥವಾ ನಾನು ಅದನ್ನು ಅಷ್ಟು ತೀವ್ರವಾಗಿ ಪರಿಗಣಿಸಿರಲಿಲ್ಲ (ಪದೇ ಪದೇ ಬೀಳುವ, "ನೈಟ್-ಮೇರ್" ಎಂದು ಕರೆಯಲ್ಪಡುವ, ಭಯಾನಕ ಕನಸುಗಳಿಂದ ವ್ಯಕ್ತಿಯ ದೈನಂದಿನ ಬದುಕು ಅಲ್ಲೋಲ ಕಲ್ಲೋಲ ಆಗುವುದೂ ಇದೆ; ಕನಸಿನ ವಿವರಗಳು ನಿಜವಾಗಿಯೂ ಎದುರಿಗೇ ಬಂದಂತೆ ಭ್ರಮಿತರಾಗುವವರೂ ಇದ್ದಾರೆ. ಇದೂ ಒಂದು ಮನೋವ್ಯಥೆಯೇ). ಇತ್ತೀಚೆಗೆ ಮುಗಿದ ಹಿಪ್ನೋಸಿಸ್ ತರಗತಿಗಳಲ್ಲಿ ರೆಗ್ರೆಷನ್ ಕೂಡಾ ಒಂದು ಪಾಠವಾಗಿತ್ತು. ಅಂಥ ಒಂದು ದಿನ, ನನ್ನ ಸಹಪಾಠಿ ನನ್ನನ್ನು ನಿಧಾನವಾಗಿ ಸಮ್ಮೋಹನ ಸ್ಥಿತಿಗೆ ಒಯ್ದು, "ನಿನ್ನ ಈಗಿನ ಜೀವನಕ್ಕೆ ಪ್ರಸ್ತುತವೆನಿಸುವ ನೆನಪುಗಳನ್ನು ತಂದುಕೋ. ನೆನಪುಗಳ ಸಾಮ್ರಾಜ್ಯದಲ್ಲಿ ನಿನಗೆ ಬೇಕಾದಲ್ಲಿಗೆ ಹೋಗು. ಸಮಯದ ಅವಕಾಶ ಮೀರುತ್ತಿದ್ದಂತೆ ನಾನು ಮತ್ತೆ ನಿನ್ನನ್ನು ವಾಸ್ತವಕ್ಕೆ ಕರೆತರಲು ನಿರ್ದೇಶಿಸುತ್ತೇನೆ. ಅಲ್ಲಿಯವರೆಗೆ ನಿನಗೆ ಬೇಕೆಂದಲ್ಲಿಗೆ ಹೋಗಿ ಬಾ" ಅಂದಳು.

ಮೊದಲು ಒಂದೆರಡು ಬೇರೆ ಬೇರೆ ತುಣುಕುಗಳನ್ನು ಸಿನಿಮಾ ಚಿತ್ರಗಳಂತೆ ಅಲ್ಲವಾದರೂ, ಗಾಢವಾದ ಭಾವನೆಗಳಿಂದ ಅನುಭವಿಸುತ್ತಾ ಯಾವುದೋ ಒಂದು ಕ್ಷಣದಲ್ಲಿ ಅದೇ ಉಸಿರುಗಟ್ಟಿಸುವ ಭಾವನೆಯುಂಟಾಯಿತು. ನನ್ನ ಕ್ರಿಟಿಕಲ್ ಮೈಂಡ್ ತಲೆಯೆತ್ತಿ, `ಇದ್ಯಾಕೆ ಹೀಗೆ?' ಅಂದಿತು, ಅಷ್ಟೇ. ಮರುಕ್ಷಣದಲ್ಲೇ ಯಾವುದೋ ಆದಿಮಾನವ ನಾನಾಗಿದ್ದೆ. ವಿಶಾಲ ಕೊಠಡಿಯಂಥ ಗುಹೆ. ಅದರ ಒಂದು ಬದಿಯಲ್ಲಿ ದೊಡ್ಡ ಬೆಂಕಿ. ನನ್ನ ಮೈಯೋ... ಬರೀ ರೋಮ-ಮಯ! ಯಾವುದೇ ಬಟ್ಟೆಗಳಿಲ್ಲ. ಬೆಂಕಿಕುಂಡದ ಒಂದು ಬದಿಗೆ ನನ್ನವಳು- ಇನ್ನೊಂದು ಆದಿಮಾನವಿ. ಅವಳಿಗೂ ಯಾವುದೇ ಬಟ್ಟೆಗಳಿಲ್ಲ. ಅಲ್ಲೇ ಎರಡು ಗುಂಡು-ಗಂಡುಗಳು ಅಂಬೆಗಾಲಿಡುತ್ತಾ ಓಡಾಡುತ್ತಿವೆ. ನೆಲವೆಲ್ಲ ಹೇಗ್ಹೇಗೋ ಕಿಚಪಿಚ ಇದೆ.

ಬೆಂಕಿಯಿಂದ ದೊಡ್ಡ ಎತ್ತಿನ ಕಾಲಿನಂಥದ್ದನ್ನು ನನ್ನವಳು ನನ್ನ ಕೈಗಿಡುತ್ತಾಳೆ. ಅಲ್ಲೇ ನಡುವಿನಲ್ಲಿದ್ದ ಬಂಡೆಯ ಮೇಲೆ ಕೂತು ಹಲ್ಲಿನಿಂದ ಕಬ್ಬನ್ನು ಸಿಗಿದು ತಿನ್ನುವಂತೆ ಅದನ್ನು ಸಿಗಿಯತೊಡಗುತ್ತೇನೆ ("ಹಾಗೆ ಸಿಗಿಯಬೇಕೆಂದು ನನಗೆ ಹೇಳಿಕೊಟ್ಟವರಾರು? ಅಯ್ಯೋ ನಾನು ಶಾಕಾಹಾರಿ, ಇದನ್ನು ಯಾಕೆ ಹೀಗೆ ತಿನ್ನುತ್ತಿದ್ದೇನೆ?" ನನ್ನ ಕ್ರಿಟಿಕಲ್ ಮೈಂಡ್ ಟೀಕಿಸುತ್ತಿದೆ). ಅವಳೂ ಇನ್ನೊಂದು ಕಾಲು-ಮಾಂಸವನ್ನು ತೆಗೆದುಕೊಂಡು ಮಕ್ಕಳನ್ನು ಕರೆಯುತ್ತಿದ್ದಾಳೆ (ನಾವೀಗ ಬೆಕ್ಕನ್ನೋ ನಾಯಿಯನ್ನೋ ಕರೆಯುವಂತೆ). ಅಷ್ಟರಲ್ಲಿ ಭೂಮಿ ನಡುಗಿ, ಗುಹೆಯ ಮೇಲ್ಛಾವಣಿ ನಮ್ಮೆಲ್ಲರ ಮೇಲೆ ಕುಸಿಯುತ್ತದೆ. ಮತ್ತೆ ಯಾವತ್ತಿನ ಕನಸಿನಂತೆ ಉಸಿರಿಗಾಗಿ ಪರದಾಡುತ್ತೇನೆ, ಗಾಳಿಗಾಗಿ ಹುಡುಕಾಡುತ್ತೇನೆ. ನನ್ನ ಈ ಗೊಂದಲ ಕಂಡು ನನ್ನ ಸಹಪಾಠಿ ನಿಧಾನವಾಗಿ ನನ್ನನ್ನು ವಾಸ್ತವಕ್ಕೆ ಕರೆತರುತ್ತಾಳೆ. ನಾವಿದ್ದ ಕೋಣೆಯ ಗಾಳಿ ಹೊಸತೆಂಬಂತೆ ಭಾಸವಾಗುತ್ತದೆ ನನಗೆ. ಇವಿಷ್ಟೂ ನಡೆದದ್ದು ಒಟ್ಟು ಏಳು ನಿಮಿಷಗಳ ಅವಧಿಯಲ್ಲಿ. ಕಾಕತಾಳೀಯವೋ ಎಂಬಂತೆ, ಆಮೇಲೆ ನನಗೆ ಅಂಥ ಕನಸು ಇಂದಿನವರೆಗೆ ಬಿದ್ದಿಲ್ಲ!!

ಈಗ ಮನೋವ್ಯಥೆಯ ವಿಚಾರಕ್ಕೆ ಬಂದರೆ, ಇಲ್ಲಿ ಹೇಳಿದ ಎರಡರಲ್ಲಿ ಯಾವುದೇ ಒಂದು ಕಾರಣಕ್ಕೆ ವ್ಯಕ್ತಿಗೆ ಮನೋವ್ಯಥೆ ಉಂಟಾಗಬಹುದು. ಪದೇ ಪದೇ ಬೀಳುವ ಕನಸೂ ಮನೋವ್ಯಥೆಗೆ ಕಾರಣವಾಗಬಹುದು. ನೀರಿನ ಬಗ್ಗೆ ತೀರದ ಕುತೂಹಲ, ಆಸಕ್ತಿ ಹೆಚ್ಚಾಗಿ, ಜೀವನ ಸುಗಮವಾಗದಷ್ಟೂ ತೀವ್ರವಾಗಿ, ತೊಂದರೆಯಾಗಬಹುದು. ಅಥವಾ ಬೇರಿನ್ಯಾವುದೇ ಕಾರಣಕ್ಕೂ ಮನೋವ್ಯಥೆ- ಅಥವಾ ಸುಗಮ ಜೀವನಕ್ಕೆ ತೊಂದರೆ- ಉಂಟಾಗಬಹುದು. ವ್ಯಕ್ತಿ ಸಮ್ಮೋಹನ ಚಿಕಿತ್ಸೆ ಬಯಸಿ ಬಂದಾಗ ಮೊದಲು ಸರಳ ಮಾತುಕತೆಯಾಡಿ ಬಂದ ಉದ್ದೇಶ, ಕಾಡುವ ವಿಷಯಗಳನ್ನು ತಿಳಿದುಕೊಂಡೇ ಸಮ್ಮೋಹಿತ ಸ್ಥಿತಿಗೆ ಚಿಕಿತ್ಸಕ ಕರೆದೊಯ್ಯುತ್ತಾರೆ. ಅಲ್ಲಿ ಸರಿಯಾದ ನಿರ್ದೇಶನಗಳನ್ನು ಕೊಡುತ್ತಾ ನೆನಪಿನ ತುಣುಕನ್ನು ಆಳದಿಂದ ಆರಿಸಿ ತರಲು ಆದೇಶಿಸುತ್ತಾರೆ. ಅದರ ಜೊತೆಗೆ ಸಂದರ್ಭಕ್ಕೆ ಸರಿಯಾಗಿ ಇತರ ಹಿನ್ನೆಲೆ, ಮುನ್ನೆಲೆಗಳನ್ನು ಪರೀಕ್ಷಿಸಲಾಗುತ್ತದೆ. ಬಳಿಕ ವ್ಯಕ್ತಿಯನ್ನು ಸಮ್ಮೋಹನದಿಂದ ಎಚ್ಚರಿಸಿ ವಾಸ್ತವಕ್ಕೆ ಕರೆತಂದು, ಆ ಎಲ್ಲ ನೆನಪಿನ ತುಣುಕುಗಳು ಈಗಿನ ಜೀವನಕ್ಕೆ ಹೇಗೆ ಪ್ರಸ್ತುತವೆಂಬುದನ್ನು ವಿಶ್ಲೇಷಿಸಲಾಗುತ್ತದೆ. ಚಿಕಿತ್ಸಕನ ನಿರ್ದೇಶನದಲ್ಲಿ, ಕಣ್ಗಾವಲಿನಲ್ಲಿ, ವ್ಯಕ್ತಿ ತನ್ನ ಹಳೆಯ ನೆನಪುಗಳನ್ನು ಕೆದಕಿ ಅಲ್ಲಿಂದ ಒಂದಿಷ್ಟು ರಾಡಿಯನ್ನು ಜಾಗೃತ ಪ್ರಜ್ಞೆಯ ಮೂಲಕ ಹೊರಹಾಕಿ ಒಳಗಿನ ನೀರನ್ನು ಸ್ವಲ್ಪ ತಿಳಿಗೊಳಿಸಿಕೊಳ್ಳಬಹುದು. ಈ ಮೂಲಕ ಕಾಡುವ ವ್ಯಥೆ ದೂರಾಗುತ್ತದೆ.

ಶುಭದಾ, ರಾಜೇಂದ್ರ ಮತ್ತು ಓದುಗರೇ, ನಿಮ್ಮ ಸಂಶಯ, ಸಂದೇಹ ಇನ್ನೂ ಬಗೆಹರಿಯಲಿಲ್ಲವಾದರೆ, ಇನ್ನಷ್ಟು ವಿವರಣೆ, ಉದಾಹರಣೆಗಳನ್ನು ಕೊಡೋಣ. ನೀವು ಕೇಳಬೇಕು, ಅಷ್ಟೇ.