ಇನ್ನೊಂದು ಅಕ್ಷರಂಗಳ

"ಹರಿವ ಲಹರಿ"ಯ ಹಾದಿ->->->

ಹೀಗೊಂದು ಯೋಚನೆ:

*ಪರಿಪೂರ್ಣತೆಯೆಂದರೆ ಮುಕ್ತಾಯ; ಹಾದಿಯ ಕೊನೆ.*

Wednesday 16 March, 2011

ಹಿಪ್ನೋಥೆರಪಿ-ಭಾಗ-೦೪

ಹಿಪ್ನೋಥೆರಪಿಸ್ಟ್ ದೃಷ್ಟಿಯಲ್ಲಿ ಆತ್ಮಗಳ ಸ್ವರೂಪ

ಹಿಂದಿನ ಕಂತಿನಲ್ಲಿ ನೀವು ಓದಿದಂತೆ, ಡಾ. ಮೈಕೇಲ್ ನ್ಯೂಟನ್ನರು ತಮ್ಮ ಗ್ರಾಹಕರ ಸಮ್ಮೋಹಿತ ಸ್ಥಿತಿಯಲ್ಲಿ ಆತ್ಮಲೋಕದ ವಿವರಗಳನ್ನು ಪಡೆದುಕೊಳ್ಳುವವರು. ಅವರ ತಿಳುವಳಿಕೆಗೆ ಬಂದಿರುವಂತೆ, ಆತ್ಮಕ್ಕಿರುವ ಜ್ಞಾನ/ಅನುಭವದ ಆಧಾರದ ಮೇಲೆ, ಆತ್ಮಗಳನ್ನು ಆರು ಸ್ತರಗಳಲ್ಲಿ ವಿಭಾಗಿಸುತ್ತಾರೆ; ನಮ್ಮ ಅರ್ಥೈಸುವಿಕೆಯ ಅನುಕೂಲಕ್ಕಾಗಿ ಈ ವಿಂಗಡಣೆ ಎನ್ನುತ್ತಾರೆ.

(೧) ಮೊದಲ ಹಂತ (ಆರಂಭಿಕ/ ಬಿಗಿನರ್): ಈ ಸ್ತರದ ಆತ್ಮಗಳು ಬಹಳಷ್ಟು ಜನ್ಮ ಎತ್ತಿಲ್ಲದಿರಬಹುದು, ಅಥವಾ ಹಲವಾರು ಜನ್ಮಗಳನ್ನು ಎತ್ತಿದ್ದರೂ ಕಲಿಯಬೇಕಾದ ಪಾಠ ಕಲಿಯದೇ ಇರಬಹುದು. ಪ್ರಪಂಚದ ಬಹುತೇಕ ಜನ ಇದೇ ಹಂತದಲ್ಲಿರುವ ಆತ್ಮರೂಪರು ಎನ್ನುವುದು ಅವರ ಅಂದಾಜು. ಅವರಲ್ಲಿ ಥೆರಪಿಗೆ ಬರುವವರಲ್ಲಿ ಅನೇಕರು ಇಂಥ ಅನನುಭವಿ ಆತ್ಮಗಳೇ. ಅವರಿಗೆ ಮೇಲ್ಸ್ತರದ ಆತ್ಮಗಳು ಗೈಡ್/ಗುರು ಆಗಿರುತ್ತಾರೆ. ಎಲ್ಲ ಆತ್ಮಗಳಿಗೂ ಒಂದು ಗೈಡ್ ಇದ್ದೇ ಇರುತ್ತಾರೆ. ಉಡಾಫೆ, ಜಂಭ, ಉದ್ಧಟತನ, ಸ್ವಾರ್ಥ, ಪುಂಡತನ... ಎಲ್ಲವೂ ಕೆಳಹಂತದ ಆತ್ಮಗಳ ಗುಣಲಕ್ಷಣಗಳು, ನಮ್ಮ ಸುತ್ತಮುತ್ತ ಗುರುತಿಸಬಹುದಲ್ಲ!
ಈ ಆತ್ಮಗಳ ಬಣ್ಣ ಶುದ್ಧ ಬಿಳಿ. ಜ್ಞಾನ ಹೆಚ್ಚಿದಂತೆಲ್ಲ ಬಣ್ಣ ಬದಲಾಗುತ್ತದೆ.

(೨) ಎರಡನೇ ಹಂತ (ಕೆಳ-ಅಂತರ್ವರ್ತಿ/ ಲೋವರ್ ಇಂಟರ್‌ಮೀಡಿಯೇಟ್): ಹಲವಾರು ಜನ್ಮಗಳನ್ನೆತ್ತಿ, ಕೆಲವಾದರೂ ಪಾಠಗಳನ್ನು ಕಲಿತು, ಒಂದಿಷ್ಟು ಮಾಗಿರುವ ಆತ್ಮಗಳಿವು. ನಯ-ವಿನಯ ಇವರುಗಳಲ್ಲಿ ತುಸುವಾದರೂ ಇರುತ್ತದೆ. ಸಾಮಾಜಿಕ ಕಾಳಜಿ ಒಂದಿನಿತು ಮೈಗೂಡಿರುತ್ತದೆ. ಇಲ್ಲಿ ಬಿಳಿಗೆ ಒಂದಿಷ್ಟೇ ಇಷ್ಟು ಹಳದಿ-ಕೆಂಪು/ ಕಿತ್ತಳೆಯ ಛಾಯೆಯಿರುತ್ತದೆ.

(೩) ಮೂರನೇ ಹಂತ (ಅಂತರ್ವರ್ತಿ/ ಇಂಟರ್‌ಮೀಡಿಯೇಟ್): ಸಮಾಜಕ್ಕಾಗಿ, ಇತರರಿಗಾಗಿ ತಮ್ಮ ಜನ್ಮ ಸವೆಸುವವರು. ಜಂಭ, ಪುಂಡುಗಾರಿಕೆಯಿಲ್ಲದೆ ನಿಃಸ್ವಾರ್ಥದಿಂದ ಕೆಲಸ ಮಾಡುವ ಇಂಥವರನ್ನು ಈಗಿನ ನಮ್ಮ ಸಮಾಜದಲ್ಲಿ ಹುಡುಕುವುದೇ ಕಷ್ಟವಲ್ಲವೆ? ಇವರುಗಳ ಆತ್ಮ ಹಳದಿ; ಬಿಳಿಯ ಛಾಯೆಯೇ ಇರುವುದಿಲ್ಲ.

(೪) ನಾಲ್ಕನೇ ಹಂತ (ಮೇಲಂತರ್ವರ್ತಿ/ ಹೈಯರ್ ಇಂಟರ್‌ಮೀಡಿಯೇಟ್): ಕಡು ಹಳದಿಯಿಂದ ಕೊನೆಗೆ ತುಸು ನೀಲಿಗೆ ತಿರುಗುವ ಈ ಆತ್ಮಗಳ ಗುಣ ಬಹಳಷ್ಟು ನಿಃಸ್ವಾರ್ಥ ಮತ್ತು ಸಮಾಜಮುಖಿ. ಈ ನೆಲೆಯ ಆತ್ಮಗಳು ಸ್ವತಃ ಗುರುಗಳಾಗುವ ತರಬೇತಿಯಲ್ಲಿ ಇರುತ್ತಾರೆ (ಜೂನಿಯರ್ ಗೈಡ್). ತಮ್ಮ ಸುಪರ್ದಿಯಲ್ಲಿ ಕೆಲವಾರು ಮೊದಲ ಹಂತದ ಆತ್ಮಗಳನ್ನು ‘ನೋಡಿಕೊಳ್ಳುವ’ ಇವರಿಗೆ ಅವರ ಗುರು-ಆತ್ಮಗಳ ಮಾರ್ಗದರ್ಶನ ಇರುತ್ತದೆ.

(೫) ಐದನೇ ಹಂತ (ಪ್ರೌಢ/ ಅಡ್ವಾನ್ಸ್‌ಡ್): ತೆಳು ನೀಲಿ ಬಣ್ಣದಿಂದ ಗುರುತಿಸಲ್ಪಡುವ ಈ ಆತ್ಮಗಳು ಗುರುಗಳೇ ಆಗಿರುತ್ತಾರೆ (ಸೀನಿಯರ್ ಗೈಡ್). ಸಮಾಜದ ಉದ್ಧಾರಕ್ಕಾಗಿಯೇ ಇವರು ಹುಟ್ಟಿದರೇನೋ ಎನಿಸುವಷ್ಟು ಕಾಳಜಿ ತೋರುವವರು. ಈ ಸ್ತರದ ಆತ್ಮಗಳಿಗೆ ಉದಾಹರಣೆ ಹೇಳುವುದಾದರೆ- ಮಹಾತ್ಮ ಗಾಂಧಿ, ವಿವೇಕಾನಂದ, ಮದರ್ ತೆರೇಸಾ... ಬೇರೆ ವಿವರಣೆ ಬೇಕಾ?

(೬) ಆರನೇ ಹಂತ (ಅತಿ-ಪ್ರೌಢ/ ಹೈಲೀ ಅಡ್ವಾನ್ಸ್‌ಡ್): ಕಡು ನೇರಳೆ ಬಣ್ಣದ ಜೊತೆಗೆ ಬೆಳಕಿನ ಪರಿವೃತ್ತ ಈ ಹಂತದ ಗುರುತು. ಈ ನೆಲೆಯ ಆತ್ಮಗಳು ಪರಿಣತ ಗುರುಗಳಾಗಿರುತ್ತಾರೆ (ಮಾಸ್ಟರ್ ಗೈಡ್). ಕ್ಷಮೆ, ದಯೆ, ಅನುಕಂಪ, ತ್ಯಾಗ, ಮುಂತಾದ ಉನ್ನತ ಗುಣಗಳನ್ನು ಮೈಗೂಡಿಸಿಕೊಂಡು ಸದಾ ತನ್ನ ಸುತ್ತಲಿನವರ ಏಳಿಗೆಗಾಗಿಯೇ ತುಡಿಯುತ್ತಿರುತ್ತಾರೆ. ಎಲ್ಲರಿಗೂ ಒಳಿತನ್ನು ಮಾಡುವುದೇ ಇವರ ಧ್ಯೇಯ ಎನ್ನುವಂತಹ ಜೀವನ. ಬಹುಶಃ ಬುದ್ಧ, ರಾಮಕೃಷ್ಣ ಪರಮಹಂಸ, ಶಾರದಾ ಮಾತೆ, ಏಸು, ಮುಂತಾದವರನ್ನು ಇಲ್ಲಿರಿಸಬಹುದೇನೋ.

ಡಾ. ನ್ಯೂಟನ್ನರ ತಿಳುವಳಿಕೆಗೆ ಬಂದಿರುವ ಆತ್ಮಗಳ ಪರಿಚಯಾತ್ಮಕ ವಿವರಣೆಯಷ್ಟೇ ಇದಾಗಿದೆ. ಇದೇ ಇದಮಿತ್ಥಂ ಅಂತೇನೂ ಅಲ್ಲ. ಆರನೇ ಹಂತವನ್ನೂ ಮೀರಿದ, ಇನ್ನೂ ಹೆಚ್ಚಿನ ಜ್ಞಾನ ಪಡೆದ ಆತ್ಮಗಳಿರಲೇಬೇಕು; ಆದರೆ ಅವೆಲ್ಲ ಪುನರ್ಜನ್ಮ ಪಡೆಯದಿರಬಹುದು, ಅಥವಾ ಮನೋವೈದ್ಯಕೀಯ ನೆರವು ಪಡೆಯಲು ಡಾ. ನ್ಯೂಟನ್ನರಲ್ಲಿಗೆ ಬಂದಿರುವವರಿಗೆ ಆ ಉನ್ನತ ಮಟ್ಟದ ಆತ್ಮಗಳ ಪರಿಚಯ ಇಲ್ಲದೇ ಇರಬಹುದು. ಅಂತೂ, "ನನ್ನ ಅರಿವಿಗೆ ಬಂದಿದ್ದು ಇಷ್ಟೇ, ಆದರೆ ಇದಕ್ಕೂ ಮೇಲಿನ ಸ್ತರಗಳಿವೆ ಅನ್ನುವುದರಲ್ಲಿ ಸಂಶಯವಿಲ್ಲ" ಅನ್ನುವುದು ಅವರ ಅರಿಕೆ.

ಎಲ್ಲ ಆತ್ಮಗಳ ಗುರಿ ಪರಿಪೂರ್ಣತೆಯನ್ನು ಸಾಧಿಸುವುದು. ಜ್ಞಾನದ ಆಗರವಾಗಿರುವ, ತೇಜಸ್ಸಿನ ಸ್ರೋತವಾಗಿರುವ, ಎಲ್ಲ ಇರುವಿಕೆಗಳ ಕಾರಣವಾಗಿರುವ, ‘ಪೂರ್ಣಕೇಂದ್ರ ಶಕ್ತಿ’ಯನ್ನು- ‘ಪರಮ ಆತ್ಮ’ವನ್ನು- ಕೂಡಿಕೊಳ್ಳುವುದು, ಆತ್ಮದ ಎಲ್ಲ ಕಲಿಕೆಯ ಮೂಲ ಉದ್ದೇಶ. ಜ್ಞಾನಾರ್ಜನೆಯಿಂದಲೇ ಅದು ಸಾಧ್ಯ. ಜ್ಞಾನವೆಂದರೆ ಯಾವುದೇ ಭಾವವಿಕಾರಗಳಿಲ್ಲದ ನಿರ್ಮೋಹದ ಶುದ್ಧ ಅರಿವು. ಮಾನವ ಜನ್ಮ ಅದಕ್ಕಿರುವ ಉತ್ತಮ ಮಾರ್ಗ, ಸುಲಭದ್ದಲ್ಲ. ಈ ಭೂಮಿ ಅತ್ಯುತ್ತಮ ಪಾಠಶಾಲೆ ಅನ್ನುವುದು ಎಲ್ಲ ಆತ್ಮಗಳ ಅಭಿಪ್ರಾಯ. ಇದಲ್ಲದೆ ಬೇರೆ ಲೋಕಗಳಿವೆ, ಅಲ್ಲಿಯೂ ಜನ್ಮವೆತ್ತುತ್ತೇವೆ. ಅಲ್ಲಿಯ ಅನುಭವ ಕಲಿಕೆ ಬೇರೆಯೇ ರೀತಿಯದ್ದು. ಭೂಮಿಯಲ್ಲಿ ಕಲಿಯುವಷ್ಟು ಬೇರೆಲ್ಲಿಯೂ ಸಿಗುವುದಿಲ್ಲ. ಅದರಲ್ಲಿಯೂ ಮಾನವ ಜನ್ಮದಲ್ಲಿ ಕಲಿಕೆ ಹೇರಳ (ಬೇರೆ ಜನ್ಮಗಳ/ ಲೋಕಗಳ ಅನುಭವಗಳನ್ನು ದಾಖಲಿಸಿದವರೂ ಇದ್ದಾರೆ, ಆದರೆ ವಿರಳ). ಈ ಎಲ್ಲ ಮಾತುಗಳು ಭಾರತೀಯರಾದ ನಮಗೆ ಹೊಸದಲ್ಲ. ಕರ್ಮ ಸಿದ್ಧಾಂತದ ಈ ಒಳಸತ್ಯವನ್ನು, ಹುರುಳನ್ನು ಡಾ. ನ್ಯೂಟನ್ನರ ಪುಸ್ತಕದಲ್ಲಿ, ‘ಆತ್ಮಗಳೊಂದಿಗಿನ ಸಂಭಾಷಣೆ’ಯಲ್ಲಿ ಓದಿದಾಗ ಆದ ಅನುಭೂತಿ ಮಾತ್ರ ಹೊಸದು, ಅನನ್ಯವಾದುದು.
(ಭಾಮಿನಿ, ಮಾರ್ಚ್ ೨೦೧೧)
(ವಿ.ಸೂ.: ಇದೇ ಬರಹ ಈ ಮೊದಲು ಸ್ವಲ್ಪ ಬೇರೆಯೇ ರೀತಿಯಲ್ಲಿ ಇದೇ ಬ್ಲಾಗಿನಲ್ಲಿ ಮೂಡಿಬಂದಿತ್ತು. ಕೆಲವು ಓದುಗರಿಗೆ ಇದು ಪುನರಾವರ್ತನೆ ಅನಿಸಬಹುದು. ಕ್ಷಮಿಸಿ)

Wednesday 2 March, 2011

ಹಿಪ್ನೋಥೆರಪಿ-ಭಾಗ-೦೩

ಹಿಪ್ನೋಥೆರಪಿ ಮತ್ತು ಹಿಂದೂ ಆತ್ಮ

ಈ ಹಿಪ್ನೋಥೆರಪಿಯ ಬಗ್ಗೆ ನನಗೆ ಮೊದಲಾಗಿ ಅರಿವಿಗೆ ಬಂದದ್ದು ೨೦೦೬ರ ಎಪ್ರಿಲ್ ತಿಂಗಳಲ್ಲಿ ಗೆಳೆಯರೊಬ್ಬರು ಓದಲು ಕೊಟ್ಟ ಡಾ. ಮೈಕೆಲ್ ನ್ಯೂಟನ್‌ರ "ಜರ್ನಿ ಆಫ಼್ ಸೋಲ್ಸ್" (ಲೆವೆಲ್ಲಿನ್ ಪಬ್ಲಿಕೇಷನ್ಸ್, ೧೯೯೪) ಪುಸ್ತಕದಿಂದ. ತದನಂತರ ಸಾಲಾಗಿ ಓದಿದ್ದು ಡಾ. ಬ್ರಯಾನ್ ವೈಸ್‌ರ "ಮೆನಿ ಲೈವ್ಸ್, ಮೆನಿ ಮಾಸ್ಟರ್ಸ್" (ಫ಼ಯರ್‌ಸೈಡ್, ೧೯೮೮), "ತ್ರೂ ಟೈಮ್ ಇನ್‌ಟು ಹೀಲಿಂಗ್" (ಫ಼ಯರ್‌ಸೈಡ್, ೧೯೯೨), "ಓನ್ಲೀ ಲವ್ ಈಸ್ ರಿಯಲ್" (ವಾರ್ನರ್ ಬುಕ್ಸ್, ೧೯೯೭), "ಮೆಸೇಜಸ್ ಫ಼್ರಮ್ ದ ಮಾಸ್ಟರ್ಸ್" (ವಾರ್ನರ್ ಬುಕ್ಸ್, ೨೦೦೦), "ಸೇಮ್ ಸೋಲ್, ಮೆನಿ ಬಾಡೀಸ್" (ಫ಼್ರೀ ಪ್ರೆಸ್, ೨೦೦೫), ಹಾಗೂ ಡಾ. ಮೈಕೆಲ್ ನ್ಯೂಟನ್‌ರ "ಡೆಸ್ಟಿನಿ ಆಫ಼್ ಸೋಲ್ಸ್" ಮತ್ತು "ಲೈಫ಼್ ಬಿಟ್ವೀನ್ ಲೈವ್ಸ್" (ಲೆವೆಲ್ಲಿನ್ ಪಬ್ಲಿಕೇಷನ್ಸ್, ೨೦೦೦, ೨೦೦೪). ಇವೆಲ್ಲ ಓದು ನಮ್ಮ ಹಿಂದೂ ಸಂಸ್ಕೃತಿಯ ಆತ್ಮವನ್ನು ಪಾಶ್ಚಾತ್ಯ ಕನ್ನಡಕದಲ್ಲಿ ತೋರಿಸಿದವು ಎಂದರೆ ತಪ್ಪಾಗಲಾರದು. ಹಿಪ್ನೋಥೆರಪಿಗೂ ಆತ್ಮಕ್ಕೂ ತೀರಾ ಹತ್ತಿರದ ನಂಟು ಇಲ್ಲಿ ಕಂಡುಬಂತು.

ಡಾ. ನ್ಯೂಟನ್ (ಕ್ಯಾಲಿಫ಼ೋರ್ನಿಯಾ) ಮತ್ತು ಡಾ. ವೈಸ್ (ಫ಼್ಲೋರಿಡಾ)- ಅಮೆರಿಕದ ಎರಡು ತೀರಗಳಲ್ಲಿ ಮನೋವೈದ್ಯರಾಗಿ ತಮ್ಮ ಕಾರ್ಯಕ್ಷೇತ್ರ ಆರಿಸಿಕೊಂಡವರು. ತಮ್ಮ ಗ್ರಾಹಕರನ್ನು ಸಮ್ಮೋಹನ ಚಿಕಿತ್ಸೆಗೆ ಒಳಪಡಿಸುತ್ತಿರುವವರು. ಇಬ್ಬರೂ ಆಕಸ್ಮಿಕವಾಗಿ ತಮ್ಮ ವೃತ್ತಿಯಲ್ಲಿ ಆತ್ಮದ ತಿಳುವಳಿಕೆ ಪಡೆದವರು. ಗ್ರಾಹಕರು ಇದ್ದಕ್ಕಿದ್ದಂತೆ ಈ ಜನ್ಮದ ಹೊರತಾಗಿ ಪೂರ್ವಜನ್ಮದ ಬಗ್ಗೆ ಮಾತನಾಡತೊಡಗಿದಾಗ ಒಮ್ಮೆಗೆ ಗಾಬರಿಯಾದರೂ ಸುಧಾರಿಸಿಕೊಂಡು ಅದನ್ನು ವಿಶ್ಲೇಷಿಸಿದವರು. ಅದರಲ್ಲಿ ಮತ್ತಷ್ಟು ಆಸಕ್ತಿ ತಾಳಿ, ಆ ಹಾದಿಯಲ್ಲೇ ಕ್ರಮಿಸಿ (ಶ್ರಮಿಸಿ), ವೈಜ್ಞಾನಿಕವಾಗಿ ಆತ್ಮದ ಬಗ್ಗೆ ವಿವರಗಳನ್ನು ಕಲೆಹಾಕಿ ಪುಸ್ತಕ ರೂಪಕ್ಕಿಳಿಸಿದವರು. ಇಬ್ಬರ ಅಭಿಪ್ರಾಯದಲ್ಲೂ ನಮ್ಮ ಆತ್ಮದಲ್ಲಿ ಪೂರ್ವಜನ್ಮದ ನೆನಪುಗಳು ಹುದುಗಿರುತ್ತವೆ.

ಪ್ರಜ್ಞೆ- ಅಪ್ರಜ್ಞೆ- ಸುಪ್ತಪ್ರಜ್ಞೆ- ಅತೀಂದ್ರಿಯ ಪ್ರಜ್ಞೆ (ಆಳವಾದ ಸಮ್ಮೋಹಿತ ಸ್ಥಿತಿ) -- ಮಾನವ ಪ್ರಜ್ಞೆಯ ವಿವಿಧ ನೆಲೆಗಳು. ಇವುಗಳಲ್ಲಿ ಪ್ರಜ್ಞೆ, ಸುಪ್ತಪ್ರಜ್ಞೆ, ಮತ್ತು ಅಪ್ರಜ್ಞೆಗಳು ಸಾಮಾನ್ಯವಾಗಿ ಎಲ್ಲರಿಗೂ ತಿಳಿದವುಗಳೇ. ಇನ್ನುಳಿದ ‘ಅತೀಂದ್ರಿಯ ಪ್ರಜ್ಞೆ’ ನಮ್ಮ ಆತ್ಮದ ನೆಲೆ. ವ್ಯಕ್ತಿ ಸಮ್ಮೋಹಿತನಾದಾಗ ಸಾಮಾನ್ಯವಾಗಿ ಇಷ್ಟು ಆಳವಾದ ಪ್ರಜ್ಞೆಯ ನೆಲೆಗೆ ಇಳಿಯುವುದಿಲ್ಲ. ಬಹುತೇಕ ಸಮ್ಮೋಹನ ಚಿಕಿತ್ಸೆಯಲ್ಲಿ ಇದೇ ಜೀವನದ ವಿವಿಧ ಸ್ತರಗಳ ಬೇನೆ-ಬೇಸರಗಳ ನೆಲೆಗಳನ್ನು ಅಗೆದು ತೆಗೆದು, ವಿವರವಾಗಿ ವಿಶ್ಲೇಷಿಸಿ ಅದನ್ನು ನೋವಿನ ನೆಲೆಯಿಂದ ಹೊರತುಗೊಳಿಸಿ, ಆಳವಾದ ಪ್ರಜ್ಞಾಸ್ತರದ ಘಾಸಿಗಳನ್ನು ವಾಸಿಮಾಡುವ ಪ್ರಯತ್ನ ನಡೆಯುತ್ತದೆ. ಆದರೆ, ಡಾ. ನ್ಯೂಟನ್ ಮತ್ತು ಡಾ. ವೈಸ್ ಹೇಳುವಂತೆ "ಪಾಸ್ಟ್ ಲೈಫ಼್ ರಿಗ್ರೆಷನ್ ಥೆರಪಿ"ಯಲ್ಲಿ ವ್ಯಕ್ತಿ ತನ್ನ ಬೇನೆ-ಬೇಸರಗಳಿಗೆ ಪೂರ್ವಜನ್ಮದ ಕಾರಣಗಳಿದ್ದರೂ ಅದನ್ನೂ ಕಂಡುಕೊಂಡು ವಾಸಿ ಮಾಡಿಕೊಳ್ಳಬಹುದು. ಮುಂದೆ ನೆಮ್ಮದಿಯ ಜೀವನ ನಡೆಸಬಹುದು.

ಈ ಮನೋವೈದ್ಯರಿಬ್ಬರೂ ತಮ್ಮ ಗ್ರಾಹಕರನ್ನು ಸಮ್ಮೋಹನಕ್ಕೆ ಒಳಪಡಿಸುವ ಮೊದಲು ಸಂದರ್ಶನದ ಮೂಲಕ ಅವರ ಪರಿಸ್ಥಿತಿಯ ಪರಿಚಯ ಮಾಡಿಕೊಳ್ಳುತ್ತಾರೆ. ಬಹುತೇಕ ಗ್ರಾಹಕರು ಇತರ ವೈದ್ಯಕೀಯ ಮತ್ತು ಮನೋವೈಜ್ಞಾನಿಕ ಶುಶ್ರೂಷೆಯನ್ನು ಪಡೆಯಲು ಪ್ರಯತ್ನಿಸಿದವರೇ. ಅದರಿಂದ ಪ್ರಯೋಜನ ದೊರಕದೆ ಇವರಲ್ಲಿ ಬಂದವರು. ಇವರುಗಳಿಗೆ ರಿಗ್ರೆಷನ್ ಮಾಡುತ್ತಾ ಒದಗಿದ ಮಾಹಿತಿಗಳಿಂದ, ಡಾ. ನ್ಯೂಟನ್ ತಮ್ಮ ಪುಸ್ತಕಗಳಲ್ಲಿ ಆತ್ಮದ ಸ್ವರೂಪ, ಆತ್ಮಗಳ ಲೋಕ, ಆತ್ಮಗಳ ಕಲಿಕೆ, ಮತ್ತು ಆತ್ಮಜ್ಞಾನದ ಹಂತಗಳನ್ನು ವಿವರಿಸುತ್ತಾರೆ. ಡಾ. ವೈಸ್, ತಮ್ಮ ಗ್ರಾಹಕರಿಗೆ ಶಾಂತಿ, ನೆಮ್ಮದಿ, ಸೌಖ್ಯ ನೀಡುವ "ಪಾಸ್ಟ್ ಲೈಫ಼್ ರಿಗ್ರೆಷನ್ ಥೆರಪಿ"ಯನ್ನೇ ತಮ್ಮ ವೃತ್ತಿಯನ್ನಾಗಿಸಿಕೊಂಡಿದ್ದಾರೆ. ರಿಗ್ರೆಷನ್ ಶಿಬಿರಗಳನ್ನೂ ಸಾಮೂಹಿಕ ಕಾರ್ಯಾಗಾರಗಳನ್ನೂ ನಡೆಸುತ್ತಿದ್ದಾರೆ.

ಡಾ. ನ್ಯೂಟನ್ ವಿವರಿಸುವಂತೆ (ಅವರ ಗ್ರಾಹಕರು ಸಮ್ಮೋಹಿತ ಸ್ಥಿತಿಯಲ್ಲಿ ತಾವು ಕಂಡುದನ್ನು ತಿಳಿಸಿದ ಆಧಾರದಲ್ಲಿ), ನಮ್ಮ ಆತ್ಮ ಶಕ್ತಿ ಸ್ವರೂಪ. ಅದಕ್ಕೆ ಮುಖ, ಕಣ್ಣು-ಕೈ-ಕಾಲು, ದೇಹ... ಏನೂ ಇಲ್ಲ. ಬರೇ ಬೆಳಕಿನ ಪುಟ್ಟ ಗೋಳದಂಥಾದ್ದು. ನಮ್ಮ ಆತ್ಮದ ಜ್ಞಾನದ ಆಳವನ್ನವಲಂಬಿಸಿ ಆ ಬೆಳಕಿನ ಗೋಳದ ಬಣ್ಣವಿರುತ್ತದೆ. ಅನನುಭವಿ, ಮೊದಲ ಹಂತದ ಆತ್ಮ ಪೂರ್ಣ ಬಿಳಿ ಬಣ್ಣದ್ದಾದರೆ, ಹಂತ ಹಂತವಾಗಿ ಕಿತ್ತಳೆ, ಹಳದಿ, ಹಸುರು, ನೀಲಿ, ನೇರಳೆ ಬಣ್ಣಗಳವರೆಗಿನ ಆತ್ಮಗಳ ಅಸ್ತಿತ್ವ ಅವರ/ಗ್ರಾಹಕರ ಅನುಭವಕ್ಕೆ ಬಂದಿದೆಯೆನ್ನುತ್ತಾರೆ. ಒಂದು ಆತ್ಮ ತನ್ನ ಭೌತಿಕ ದೇಹದಿಂದ ಹೊರಬಿದ್ದೊಡನೆ, ಆ ಆತ್ಮಗತ ಜ್ಞಾನವನ್ನು ಅವಲಂಬಿಸಿ, ಆತ್ಮಲೋಕ (ಸ್ಪಿರಿಟ್/ಸೋಲ್ ವರ್ಲ್ಡ್) ತಲುಪುತ್ತದೆ. ಕೆಲವು ಕಿರಿಯ/ಎಳೆಯ ಅಥವಾ ಅನನುಭವಿ ಆತ್ಮಗಳು ಗಲಿಬಿಲಿಗೊಂಡು ಭೂಮಿಯ ವಾಯುವಲಯದಲ್ಲೇ ಕೆಲಕ್ಷಣಗಳ ಕಾಲ ಸುತ್ತುತ್ತಿರಬಹುದು. ಆಗ ಅಂಥಾ ಆತ್ಮದ ಗುರುಸ್ಥಾನದಲ್ಲಿರುವ ಆತ್ಮ, ಭೌತಿಕ ದೇಹದಲ್ಲಿದ್ದಾಗ ಹತ್ತಿರದ ಸಂಬಂಧಿಕರಾಗಿದ್ದವರ ಆತ್ಮ, ಈ ಆತ್ಮವನ್ನು ಹದವಾದ ಸೆಳೆತಕ್ಕೊಳಪಡಿಸಿ ನಿಜನೆಲೆಯಾದ ಆತ್ಮಲೋಕದ ಕಡೆಗೆ ಕರೆಸಿಕೊಳ್ಳುತ್ತವೆ. ಸ್ವಲ್ಪ ಅನುಭವವಿರುವ ಆತ್ಮ (ಹಲವಾರು ಜನ್ಮಗಳನ್ನೆತ್ತಿದ ಆತ್ಮ, ಹಲವು ಬಾರಿ ಪ್ರಯಾಣ ಮಾಡಿದವರಂತೆ) ತನ್ನ ಮನೆಯತ್ತ ತಾನೇ ಪಯಣಿಸುತ್ತದೆ. ಬಹುತೇಕ ಆತ್ಮಗಳು ಭೌತಿಕ ಸಾವಿನ ಬಳಿಕ "ಒಂದು ಬೆಳಕಿನ ಕೊಳವೆಯೊಳಗೆ ವೇಗವಾಗಿ ಸಾಗಿದ" ಅನುಭವ ಪಡೆಯುತ್ತವೆ.

ಡಾ. ವೈಸ್ ತಮ್ಮ ಪುಸ್ತಕಗಳಲ್ಲಿ ಆತ್ಮಲೋಕದ ಬದಲಾಗಿ ಆತ್ಮಗಳ ಬಗೆಗೇ ತಿಳಿಸುತ್ತಾರೆ. ಗುರು/ಗೈಡ್ ಆತ್ಮಗಳ ಬಗ್ಗೆ ಬರೆಯುತ್ತಾರೆ. ಸಮ್ಮೋಹನದಲ್ಲಿರುವ ತಮ್ಮ ಗ್ರಾಹಕರು ಗೈಡ್ ನೀಡುವ ಸಂದೇಶಗಳನ್ನು ತಮಗರಿವಿಲ್ಲದೆಯೇ ಅರುಹುವುದನ್ನು ಬರೆಯುತ್ತಾರೆ. ಎರಡು ಜನ್ಮಗಳ ನಡುವೆ ಆತ್ಮ ಪುನಶ್ಚೇತನಗೊಳ್ಳುವ ಲೋಕದ ಬಗ್ಗೆ ಇಲ್ಲಿ ಹೆಚ್ಚು ಮಾತಿಲ್ಲ. ನಮ್ಮ ಹಿಂದಿನ ಜೀವನ ಹೇಗಿತ್ತು, ಮುಂದಿನದು ಹೇಗಿರಬಲ್ಲುದು ಎನ್ನುವುದರ ಸುತ್ತಲೇ ಅವರ ಕೆಲಸ. ಅವರ ಪ್ರಕಾರ ಎಲ್ಲ ಆತ್ಮಗಳೂ ಒಂದೇ; ಅನುಭವದ ಆಳಗಳು ಬೇರೆಬೇರೆ, ಅಷ್ಟೇ. ಬಣ್ಣಗೋಳಗಳ ಬಗ್ಗೆ ಅವರು ತಿಳಿಸುವುದಿಲ್ಲ, ಚೇತನದತ್ತ ಅವರ ಗಮನ. ಸ್ವಸಮ್ಮೋಹನದ ಬಗ್ಗೆಯೂ ಡಾ. ವೈಸ್ ತಿಳಿಸುತ್ತಾರೆ; ಮೆಡಿಟೇಷನ್, ಧ್ಯಾನ, ಏಕಾಗ್ರತೆಯನ್ನು ಅಭ್ಯಸಿಸಲು ಹೇಳುತ್ತಾರೆ. ನಿದ್ದೆ-ಎಚ್ಚರಗಳ ನಡುವಿನ ಸ್ಥಿತಿಯಲ್ಲಿನ ಕನಸುಗಳನ್ನು ನೆನಪಿರಿಸಿಕೊಂಡು ಅವನ್ನು ಗುರುತು ಹಾಕಿಕೊಂಡು ಒಂದು ಸೂತ್ರದಲ್ಲಿ ಹೆಣೆಯಲಾಗುತ್ತದೆಯೋ ನೋಡಿ, ಅನ್ನುತ್ತಾರೆ. ಅಗಲಿದ ಆತ್ಮೀಯರಿಂದ ಸಂದೇಶಗಳು ಬರಬಹುದು, ಬರುತ್ತವೆ; ಮನಸ್ಸು ಮುಕ್ತವಾಗಿರಲಿ, ಎಂದು ಸಾರುತ್ತಾರೆ.
(ಭಾಮಿನಿ, ಫ಼ೆಬ್ರವರಿ ೨೦೧೧)