ಇನ್ನೊಂದು ಅಕ್ಷರಂಗಳ

"ಹರಿವ ಲಹರಿ"ಯ ಹಾದಿ->->->

ಹೀಗೊಂದು ಯೋಚನೆ:

*ಪರಿಪೂರ್ಣತೆಯೆಂದರೆ ಮುಕ್ತಾಯ; ಹಾದಿಯ ಕೊನೆ.*

Monday 30 April, 2007

ಆತ್ಮ ಚಿಂತನ-೦೧

"ನನ್ನ ಇತ್ತೀಚಿನ ಓದಿನ ಪ್ರಕಾರ..." ಎಂದಿದ್ದೆ.
ಕಳೆದೊಂದು ವರ್ಷದಿಂದ `ಆತ್ಮ'ದ ಬಗ್ಗೆ ಓದುತ್ತಿದ್ದೇನೆ.
ಮೊದಲಾಗಿ ಓದಿದ್ದು (ಗೆಳೆಯರೊಬ್ಬರು ತಂದುಕೊಟ್ಟದ್ದು): ಮೈಕೆಲ್ ನ್ಯೂಟನ್‌ರ "ಜರ್ನಿ ಆಫ್ ಸೋಲ್ಸ್" (ಲೆವೆಲ್ಲಿನ್ ಪಬ್ಲಿಕೇಷನ್ಸ್, ೧೯೯೪). ತದನಂತರ ಸಾಲಾಗಿ ಓದಿದ್ದು: ಬ್ರಯಾನ್ ವೈಸ್‌ರ "ಮೆನಿ ಲೈವ್ಸ್, ಮೆನಿ ಮಾಸ್ಟರ್ಸ್" (ಫಯ‌ರ್ ಸೈಡ್, ೧೯೮೮), "ತ್ರೂ ಟೈಮ್ ಇನ್‍ಟು ಹೀಲಿಂಗ್" (ಫಯರ್ ಸೈಡ್, ೧೯೯೨), "ಮೆಸೇಜಸ್ ಫ್ರಮ್ ದ ಮಾಸ್ಟರ್ಸ್" (ವಾರ್ನರ್ ಬುಕ್ಸ್, ೨೦೦೦). ಈಗ ಓದುತ್ತಿರುವುದು: ಮೈಕೆಲ್ ನ್ಯೂಟನ್‌ರ "ಡೆಸ್ಟಿನಿ ಆಫ್ ಸೋಲ್ಸ್" (ಲೆವೆಲ್ಲಿನ್ ಪಬ್ಲಿಕೇಷನ್ಸ್, ೨೦೦೬).

ಡಾ.ನ್ಯೂಟನ್ (ಕ್ಯಾಲಿಫೋರ್ನಿಯಾ) ಮತ್ತು ಡಾ.ವೈಸ್ (ಫ್ಲೋರಿಡಾ)- ಅಮೆರಿಕದ ಎರಡು ತೀರಗಳಲ್ಲಿ ಮನೋವೈದ್ಯರಾಗಿ ತಮ್ಮ ಕಾರ್ಯಕ್ಷೇತ್ರ ಆರಿಸಿಕೊಂಡವರು. ತಮ್ಮ ಗ್ರಾಹಕರನ್ನು ಸಮ್ಮೋಹನ ಚಿಕಿತ್ಸೆಗೆ ಒಳಪಡಿಸುತ್ತಿದ್ದವರು. ಇಬ್ಬರೂ ಆಕಸ್ಮಿಕವಾಗಿ ತಮ್ಮ ವೃತ್ತಿಯಲ್ಲಿ ಆತ್ಮದ ತಿಳುವಳಿಕೆ ಪಡೆದವರು. ಗ್ರಾಹಕರು ಇದ್ದಕ್ಕಿದ್ದಂತೆ ಈ ಜನ್ಮದ ಹೊರತಾಗಿ ಪೂರ್ವಜನ್ಮದ ಬಗ್ಗೆ ಮಾತನಾಡತೊಡಗಿದಾಗ ಒಮ್ಮೆಗೆ ಗಾಬರಿಯಾದರೂ ಸುಧಾರಿಸಿಕೊಂಡು ಅದನ್ನು ವಿಶ್ಲೇಷಿಸಿದವರು. ಅದರಲ್ಲಿ ಮತ್ತಷ್ಟು ಆಸಕ್ತಿ ತಾಳಿ, ಆ ಹಾದಿಯಲ್ಲೇ ಕ್ರಮಿಸಿ (ಶ್ರಮಿಸಿ), ವೈಜ್ಞಾನಿಕವಾಗಿ ಆತ್ಮದ ಬಗ್ಗೆ ಒಂದಿಷ್ಟು ವಿವರ ಕಲೆಹಾಕಿ ಪುಸ್ತಕ ರೂಪಕ್ಕಿಳಿಸಿದವರು. ಇಬ್ಬರ ಅಭಿಪ್ರಾಯದಲ್ಲೂ ನಮ್ಮ ಆತ್ಮದಲ್ಲಿ ಪೂರ್ವಜನ್ಮದ ನೆನಪುಗಳು ಹುದುಗಿರುತ್ತವೆ.

ಪ್ರಜ್ಞೆ- ಸುಪ್ತಪ್ರಜ್ಞೆ- ಉಪಪ್ರಜ್ಞೆ- ಅತೀಂದ್ರಿಯ ಪ್ರಜ್ಞೆ (ಆಳವಾದ ಸಮ್ಮೋಹಿತ ಸ್ಥಿತಿ) [conscious- unconscious- subconscious- superconscious (of deep hypnotic stage)]-- ಮಾನವ ಪ್ರಜ್ಞೆಯ ವಿವಿಧ ನೆಲೆಗಳು. ಇವುಗಳಲ್ಲಿ ಪ್ರಜ್ಞೆ, ಸುಪ್ತಪ್ರಜ್ಞೆ, ಮತ್ತು ಉಪಪ್ರಜ್ಞೆಗಳು ಸಾಮಾನ್ಯವಾಗಿ ಎಲ್ಲರಿಗೂ ತಿಳಿದವುಗಳೇ. ಇನ್ನುಳಿದ `ಅತೀಂದ್ರಿಯ ಪ್ರಜ್ಞೆ' ನಮ್ಮ ಆತ್ಮದ ನೆಲೆ. ವ್ಯಕ್ತಿ ಸಮ್ಮೋಹಿತನಾದಾಗ ಸಾಮಾನ್ಯವಾಗಿ ಇಷ್ಟು ಆಳವಾದ ಪ್ರಜ್ಞಾನೆಲೆಗೆ ಇಳಿಯುವುದಿಲ್ಲ. ಬಹುತೇಕ ಸಮ್ಮೋಹನ ಚಿಕಿತ್ಸೆಯಲ್ಲಿ ಇದೇ ಜೀವನದ ವಿವಿಧ ಸ್ತರಗಳ ಬೇನೆ-ಬೇಸರಗಳ ನೆಲೆಗಳನ್ನು ಅಗೆದು ತೆಗೆದು, ವಿವರವಾಗಿ ವಿಶ್ಲೇಷಿಸಿ ಅದನ್ನು ನೋವಿನ ನೆಲೆಯಿಂದ ಹೊರತುಗೊಳಿಸಿ, ಆಳವಾದ ಪ್ರಜ್ಞಾಸ್ತರದ ಘಾಸಿಗಳನ್ನು ವಾಸಿಮಾಡುವ ಪ್ರಯತ್ನ ನಡೆಯುತ್ತದೆ. ಆದರೆ, ಡಾ.ನ್ಯೂಟನ್ ಮತ್ತು ಡಾ.ವೈಸ್ ಹೇಳುವಂತೆ "ರೆಗ್ರೆಷನ್ ಥೆರಪಿ"ಯಲ್ಲಿ ವ್ಯಕ್ತಿ ತನ್ನ ಬೇನೆ-ಬೇಸರಗಳಿಗೆ ಪೂರ್ವಜನ್ಮದ ಕಾರಣಗಳಿದ್ದರೂ ಅದನ್ನೂ ಕಂಡುಕೊಂಡು ವಾಸಿ ಮಾಡಿಕೊಳ್ಳಬಹುದು. ಮುಂದೆ ಶಾಂತ ಜೀವನ ನಡೆಸಬಹುದು.

ಮೊದಲ ಕಂತಿಗೆ ಇದಿಷ್ಟು ಸಾಕು. ಮುಂದಿನ ಕಂತಿನಲ್ಲಿ ಮುಂದುವರಿಯೋಣ....

7 comments:

Anonymous said...

ಹಿಂದೆ ಯಾವ ಜನ್ಮದಲ್ಲೋ ಮಿಂದ ಪ್ರೇಮ ಜಲದ ಕಂಪು....ಮರು ಜನ್ಮದಲ್ಲಿಯೂ ನೆನಪಿರುತ್ತದೆ ಅಂತ ಆಯ್ತು!

ಅನಿಕೇತನ said...

I am waiting for your next edition .. !

ಸುಪ್ತದೀಪ್ತಿ suptadeepti said...

@ಅನಿಕೇತನ: ಖಂಡಿತಾ ಬರೆಯುತ್ತೇನೆ. ಭೇಟಿಯಿತ್ತಿದ್ದಕ್ಕೆ ಸ್ವಾಗತ.

@ಶ್ರೀತ್ರಿ: "...ಪ್ರೇಮ ಜಲದ ಕಂಪು...." ಮಾತ್ರವಲ್ಲ ಎಲ್ಲ ಭಾವಗಳ ನೋವುಗಳ ನೆನಪುಗಳೂ ಇರುತ್ತವೆ. ಬೇಕೇ ಬೇಕಾದಾಗ ಆ ನೆನಪುಗಳು "ದೇ-ಜ-ವೂ" ರೂಪದಲ್ಲಾಗಲೀ, ವಿಸ್ಮಯಕಾರಿ ನೆನಪಿನಂತಾಗಲೀ, ಕನಸಿನಂತಾಗಲೀ ಮರುಕಳಿಸಿ ವಾಸ್ತವ ಪ್ರಜ್ಞೆಯ ಸ್ತರಕ್ಕೆ ಎದ್ದು ಬರುತ್ತವೆ.

Shiv said...

ಸುಪ್ತದೀಪ್ತಿಯವರೇ,

ಬೇನೆ ಬೇಸರಗಳಿಗೆ ಪೂರ್ವಜನ್ಮದ ಕಾರಣಗಳೇ?
ಅದು ಹೇಗೆ? ಅದನ್ನು ವಾಸಿಪಡಿಸುವದರೆಂದರೆ ಹೇಗೆ?

ಅಂದ ಹಾಗೆ ಸಾಧ್ಯವಾದರೆ 'ದೇ-ಜ-ವೂ' ಬಗ್ಗೆ ಒಂದು ಎಪಿಸೋಡ್ ಬರೆಯಿರಿ..ಕೆಲವೊಮ್ಮೆ ತುಂಬಾ ಕಾಡಿಸುತ್ತೆ ಈ ದೇ-ಜ-ವೂ

mouna said...

very insightful.

kaLeda janmavannu upoyogisi besaragaLLaNNu nivaarisuvudu, ondhu oohisalaaradanthaha vishaya(nanna yochane).

inondhu maatu, yellaru poorvajanma inthadarannu nambalaararu. namma nithya jeevanadalli, saamanyavaagi, 'super-conscious' bittu mikkidellavannu anubhavisirutteve... of course, naavu yella ghaTanegallanu parisheelisuvudaake sadhyavilla...alve?

ಸುಪ್ತದೀಪ್ತಿ suptadeepti said...

@ಶಿವ್, ಎಲ್ಲ ಬೇನೆ-ಬೇಸರಗಳಿಗೆ ಅಲ್ಲ. ಕೆಲವೊಂದು ನೋವುಗಳು, ಖಾಯಿಲೆಗಳು, ವೈದ್ಯಕೀಯವಾಗಿ ವಿವರಿಸಲಾಗದ ವಿಶೇಷ ಪರಿಸ್ಥಿತಿಗಳನ್ನು 'ರೆಗ್ರೆಷನ್ ಥೆರಪಿ' ವಿಧಾನದಲ್ಲಿ ಗುಣಪಡಿಸಬಹುದು.

'ದೇ-ಜ'ವೂ' ಬಗ್ಗೆ ನನಗೂ ಆಸಕ್ತಿಯಿದೆ, ಆದರೆ ವಿವರವಾಗಿ ಗೊತ್ತಿಲ್ಲ. ಅದರ ಬಗ್ಗೆ ತಿಳಿದಷ್ಟನ್ನು ಬರೆಯಬಲ್ಲೆ.

@ಮೌನ, ನಿಜ, ಎಲ್ಲರೂ ಆತ್ಮದ ಬಗ್ಗೆ, ಪೂರ್ವ/ಪುನರ್-ಜನ್ಮಗಳ ಬಗ್ಗೆ ನಂಬಲಾರರು. ನಾನೂ ನಂಬಿರಲಿಲ್ಲ. 'ಪಲಾಯನವಾದ' ಎಂದು ವಾದ ಮಾಡುತ್ತಿದ್ದೆ, ಈ ಪುಸ್ತಕಗಳನ್ನು ಓದುವವರೆಗೆ. ಈಗ, ಮನೋವೈಜ್ಞಾನಿಕವಾಗಿ ಒಪ್ಪುವ ಅತೀಂದ್ರಿಯ ಪ್ರಜ್ಞೆಯೇ ಆತ್ಮಶಕ್ತಿ ಎಂದಾದಮೇಲೆ ನಂಬಿಕೆಗೂ ಮೀರಿದ ವಿಶ್ವಾಸ ಬೆಳೆದಿದೆ.

ಸುಪ್ತದೀಪ್ತಿ suptadeepti said...

ಮೌನ, ನನ್ನ ಬ್ಲಾಗಿಗೆ ಸ್ವಾಗತ. ಮೊದಲ ಬಾರಿ ಬಂದಿದ್ದೀರಿ, ಅಲ್ಲವೇ?